ಮಡಿಕೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ಎಲಿಯಂಗಾಡ್ ಫ್ರೆಂಡ್ಸ್ ಯುವಕ ಸಂಘದಿಂದ ಡಿ.31ರಂದು ಕೊಡಂಗೇರಿಯ ಎಲಿಯಂಗಾಡುವಿನಲ್ಲಿ 2ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 30 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಕ್ರೀಡಾಕೂಟದ ಜತೆಗೆ ಗ್ರಾಮದಲ್ಲಿರುವ ಸಮಸ್ಯೆಯ ಬಗ್ಗೆ ಪಂದ್ಯಾವಳಿಗೆ ಆಗಮಿಸುವ ಜನಪ್ರತಿನಿಧಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ರಾಜ್ಯ ವಾಲಿಬಾಲ್ ತಂಡದ ಪ್ರಮುಖ ತರಬೇತುದಾರ ಕೊಡಗು ಜಿಲ್ಲೆಯ ಪಂದಿಕಂಡ ಸತೀಶ್ ಅವರನ್ನು ಇದೇ ಸಂದರ್ಭ ವೇಳೆ ಸನ್ಮಾನಿಸಲಾಗುವುದು. ವಿಜೇತ ತಂಡಕ್ಕೆ ₹12 ಸಾವಿರ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ₹8 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಬಹುಮಾನವಾಗಿ ನೀಡಲಾಗುವುದು. ಪ್ರತಿ ತಂಡಕ್ಕೆ ₹600 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮಾಹಿತಿಗೆ ಮೊಬೈಲ್ 97403 01963, 96639 41595 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಾಲಿಬಾಲ್ ಅಸೋಸಿಯೇಷನ್ ಕೇವಲ ಕುಶಾಲನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ವ್ಯಾಪ್ತಿಯ ಪ್ರತಿ ಗ್ರಾಮದ ಯುವ ಆಟಗಾರರನ್ನು ಬೆಳಕಿಗೆ ತರುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಕೆ.ಗಫೂರ್, ಕಾರ್ಯದರ್ಶಿ ಕೆ.ಎಚ್.ಅನ್ವರ್, ಸದಸ್ಯರಾದ ಕೆ.ವೈ.ಸಮ್ಮದ್, ಶಾಹಿದ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.