
ಮಡಿಕೇರಿ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಗುರುವಾರ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆ ನಡೆಯಿತು.
ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯು (ಸ್ವೀಪ್) ವತಿಯಿಂದ ನಡೆದ ಈ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗಿಯಾದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲು ಮತ್ತು ಅಭಿಯಾನದ ಅಂಗವಾಗಿ ಪರಿಶೀಲನೆ ನಡೆಸಲು ಮುಖ್ಯ ಲೆಕ್ಕಾಧಿಕಾರಿ ಜ್ಹುವೆಲ್ ಖಾನ್, ನಗರಸಭೆ ಕಮಿಷನರ್ ವಿಜಯ್, ಪರಿಸರ ಎಂಜಿನಿಯರ್ ಸೌಮ್ಯಾ, ಕಂದಾಯ ಅಧಿಕಾರಿಗಳಾದ ಎಂ.ಎ.ತಾಹಿರ್ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ, ಸಹ ಪಠ್ಯ ಚಟುವಟಿಕೆಯ ಸಂಯೋಜಕಿ ಡಾ.ರೇಣುಶ್ರೀ ಇದ್ದರು.
ಮತದಾನ ಪ್ರತಿಜ್ಞಾವಿಧಿಯನ್ನು ನಗರಸಭೆಯ ಕಮಿಷನರ್ ವಿಜಯ್ ಬೋಧಿಸಿದರು.
ರಂಗೋಲಿ ಸ್ಪರ್ಧೆಯ ವಿಜೇತರು: ಶಿವ - ದ್ವಿತೀಯ ಎಂ.ಕಾಂ (ಪ್ರಥಮ) , ಯೋಗಿನಿ ದ್ವಿತೀಯ ಬಿ.ಕಾಂ (ದ್ವಿತೀಯ), ಯಶೋಧಾ ದ್ವಿತೀಯ ಎಂ.ಎ. (ತೃತೀಯ)
ಚಿತ್ರಕಲೆ ಸ್ಪರ್ಧೆ: ರೋಹಿತ್ ಪಿ.ವಿ. ದ್ವಿತೀಯ ಬಿಸಿಎ (ಪ್ರಥಮ), ಭೀಮಾ ಪ್ರಥಮ ಬಿ.ಎ (ದ್ವಿತೀಯ), ಮೋನಿಕಾ ದ್ವಿತೀಯ ಬಿಸಿಎ (ತೃತೀಯ)
ವಿರಾಜಪೇಟೆಯಲ್ಲಿ ಜಾಗೃತಿ ಅಭಿಯಾನ
ವಿರಾಜಪೇಟೆ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ತಾಲ್ಲೂಕು ಸ್ವೀಪ್ ಸಮಿತಿ ವಿರಾಜಪೇಟೆ ಪುರಸಭೆ ವತಿಯಿಂದ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು. ‘ಮತದಾನದ ಕಾರ್ಯದಲ್ಲಿ ಹಬ್ಬದಂತೆ ಎಲ್ಲರೂ ಸಂಭ್ರಮಿಸಬೇಕು.
ಈ ಹಬ್ಬದಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಏಪ್ರಿಲ್ 26 ರಂದು ಮತದಾನ ಜರುಗಲಿದ್ದು ಎಲ್ಲರೂ ಮತದಾರರ ಗುರುತಿನ ಚೀಟಿಯೊಂದಿಗೆ ಹಾಗೂ ಚುನಾವಣಾ ಆಯೋಗದ ಸೂಚಿಸಿದ ದಾಖಲೆಗಳೊಂದಿಗೆ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಬೇಕು’ ಎಂದು ಅರಿವು ಮೂಡಿಸಲಾಯಿತು. ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ ಮಾರುಕಟ್ಟೆ ಪ್ರದೇಶ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.