ವಿರಾಜಪೇಟೆ: ಬಿಳಿಗೂಬೆ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ವಿರಾಜಪೇಟೆ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.
ಕೇರಳದ ಕಾಸರಗೋಡಿನ ಮಂಜೇಶ್ವರದ ಮಹಮದ್ ನಡುಬೈಲ್, ಅಬ್ದುಲ್ ಸತ್ತಾರ್ ನಡುಬೈಲ್ ಹಾಗೂ ದಕ್ಷಿಣ ಕನ್ನಡದ ದೇರಳಕಟ್ಟೆಯ ಶೇಕಬ್ಬ ಬಂಧಿತರು.
ಕಾಸರಗೋಡಿನಿಂದ ಬಿಳಿಗೂಬೆಯನ್ನು ಹಿಡಿದು ಕಾರಿನಲ್ಲಿ ತಂದಿದ್ದ ಆರೋಪಿಗಳು ಪಟ್ಟಣದ ಚಿಕ್ಕಪೇಟೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿ, ಬಿಳಿಗೂಬೆಯನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಮಡಿಕೇರಿ ಘಟಕದ ಎಸ್.ಪಿ ಚಂದ್ರಕಾಂತ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ವೀಣಾ ನಾಯಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸಿಬ್ಬಂದಿಯಾದ ಟಿ.ಪಿ.ಮಂಜುನಾಥ್, ಕೆ.ಎಸ್.ದೇವಯ್ಯ, ಸಿ.ಬಿ.ಬೀನಾ, ಎಸ್.ಎಂ.ಯೋಗೇಶ್, ಪಿ.ಯು.ಮುನೀರ್, ಆರ್.ನಂದಕುಮಾರ್ ಕಾರ್ಯಾಚರಣೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.