
ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಫಸಲು ಭರಿತ ಬೆಳೆಗಳನ್ನು ತಿಂದು ನಾಶಪಡಿಸುತ್ತಿವೆ.
ಸಮೀಪದ ಉಪ್ಪುತೋಡು ಗ್ರಾಮದ ಸಾವಿತ್ರಿ ರೈ ಎಂಬುವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಹಾಕಿದೆ. ಕಳೆದ ಕೆಲವು ದಿನಗಳ ಹಿಂದೆ ಇದೇ ಕಾರಿನ ಮೇಲೆ ದಾಳಿ ನಡೆಸಿದ್ದ ಕಾಡಾನೆ ಕಾರಿನ ಗಾಜುಗಳನ್ನು ಒಡೆದು ಹಾಕಿತ್ತು. ಅದನ್ನು ಸರಿಪಡಿಸಿ ತಂದ ನಂತರ ಮತ್ತೊಮ್ಮೆ ಶುಕ್ರವಾರ ರಾತ್ರಿ ಹಾನಿಗೊಳಿಸಿದೆ.
ಸಮೀಪದ ಕಂಬಿಬಾಣೆಯಲ್ಲಿ ಶನಿವಾರ ಬೆಳಿಗ್ಗೆ 7.15ರ ಸುಮಾರಿನಲ್ಲಿ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ರಾಜಾರೋಷವಾಗಿ ನಡೆದುಕೊಂಡು ಹೋಗಿದೆ.
ಕಂಬಿಬಾಣೆ ಊರುಗುಪ್ಪೆ ಪೈಸಾರಿಯ ಟಾಟಾ ಎಸ್ಟೇಟ್ನ ಲೈನ್ ಮನೆ ಕಡೆಯಿಂದ ರಸ್ತೆಗೆ ಬಂದ ಕಾಡಾನೆಯನ್ನು ಕಂಡು ನಾಯಿಗಳು ಬೊಬ್ಬಿಟ್ಟಿವೆ. ಇದರಿಂದ ಹೆದರಿದ ಆ ಕಾಡಾನೆ ನಳಂದ ತೋಟದ ಗೇಟು ಮುರಿದು ನೇರವಾಗಿ ಬಂದಿದೆ. ಇದೇ ವೇಳೆ ಕಂಬಿಬಾಣೆ ಗ್ರಾಮ ಪಂಚಾಯಿತಿ ಸಿಬ್ಬಂದಿ ರವಿ ಅವರ ಮನೆಯ ಗೇಟಿನ ಮೂಲಕ ಅವರ ಬೈಕು, ಸ್ಕೂಟರ್ ಹಾಗೂ ಸೈಕಲನ್ನು ಬದಿಗೆ ಸರಿಸಿ ಮುಖ್ಯ ರಸ್ತೆಯಲ್ಲಿ ಸಾಗಿ ಅಲ್ಲಿಂದ ಟಾಟಾ ಎಸ್ಟೇಟ್ ಗೆ ನುಗ್ಗಿದೆ.
ವಿಷಯವರಿತ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದರು. ಈ ಭಾಗದಲ್ಲಿ ಸುಮಾರು 11ಕ್ಕಿಂತ ಹೆಚ್ಚಿನ ಕಾಡಾನೆಗಳು ಅಕ್ಕ ಪಕ್ಕದ ತೋಟದಲ್ಲಿ ಬೀಡು ಬಿಟ್ಟಿವೆ. ಶನಿವಾರ ದಿಢೀರನೆ ಕಾಣಿಸಿಕೊಂಡ ಕಾಡಾನೆಯನ್ನು ಕಂಡ ಜನ ಆತಂಕಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.