ಕೆಜಿಎಫ್: ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಸಾರ್ವಜನಿಕರಲ್ಲಿ ಅರಿವು ಉಂಟು ಮಾಡಲು ನಗರಸಭೆ ಏರ್ಪಡಿಸಿದ್ದ ಜಾಗೃತಿ ಜಾಥಾ ಸಂದರ್ಭದಲ್ಲಿ ಸಾರ್ವಜನಿಕರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ರಾಬರ್ಟಸನ್ಪೇಟೆ ನಗರಸಭೆ ಮೈದಾನದಲ್ಲಿ ಬೆರಳಣಿಕೆಯಷ್ಟು ಅಧಿಕಾರಿಗಳು ಮತ್ತು ಕೆಲ ವಿದ್ಯಾರ್ಥಿಗಳು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದರು. ಮೆರವಣಿಗೆಯನ್ನು ನೋಡಲು ಬಂದ ಸಾರ್ವಜನಿಕರು ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಿಧಾನಸಭಾ ಚುನಾವಣೆಗೆ ಮುನ್ನವೇ ಹದಿನೆಂಟು ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದರೂ ಅರ್ಹ ಮತದಾರರಿಗೆ ಗುರುತಿನ ಚೀಟಿ ನೀಡಿಲ್ಲ. ಹಣ ಕೊಟ್ಟವರಿಗೆ ಮಾತ್ರ ಗುರುತಿನ ಚೀಟಿ ನೀಡಲಾಗಿದೆ.
ಈ ಬಗ್ಗೆ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ, ಮತದಾರಪಟ್ಟಿ ಪರಿಷ್ಕರಣೆ ಬಗ್ಗೆ ಆಯುಕ್ತರ ಮಾತು ನಂಬಿದ ಅರ್ಹ ಮತದಾರರು ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಕಳೆದುಕೊಳ್ಳುವಂತಾಯಿತು ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಶಾಖೆಯ ನೌಕರರಿಗೆ 200 ರೂಪಾಯಿ ಕೊಟ್ಟರೆ ಎರಡು ದಿನಗಳಲ್ಲಿ ಚೀಟಿ ಕೊಡುತ್ತಾರೆ. 500 ರೂಪಾಯಿ ನೀಡಿದರೆ ಒಂದೇ ದಿನದಲ್ಲಿ ನೀಡುತ್ತಾರೆ. ಹಣ ಕೊಡದವರಿಗೆ ಇದುವರೆವಿಗೂ ಚೀಟಿ ಕೊಟ್ಟಿಲ್ಲ. ನೌಕರನನ್ನು ವಿಚಾರಿಸಿದರೆ ಸರ್ವರ್ಡೌನ್ ಆಗಿದೆ. ಕಂಪ್ಯೂಟರ್ ಲಾಕ್ ಆಗಿದೆ ಎಂಬ ಸಬೂಬು ಹೇಳುತ್ತಾರೆ ಎಂದು ನೊಂದ ಅರ್ಜಿದಾರ ಜಯಕುಮಾರ್ ಜರ್ರಿ ಆರೋಪಿಸಿದರು.
ಸಾರ್ವಜನಿಕರನ್ನು ಸಮಾಧಾನ ಪಡಿಸಿದ ನಗರಸಭೆ ಮ್ಯಾನೇಜರ್ ನಂಜುಂಡಸ್ವಾಮಿ, ಈ ಬಗ್ಗೆ ನನಗೆ ಗೊತ್ತಿರಲಿಲ್ಲ, ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಆಶ್ವಾಸನೆ ನೀಡಿದರು. ನಂತರ ಮೆರವಣಿಗೆ ಪ್ರಾರಂಭವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.