ADVERTISEMENT

ಅಧಿಕಾರಿಗಳ ತಂಡ ಬಂಗಾರಪೇಟೆಗೆ ಭೇಟಿ

ತಮಿಳುನಾಡು ಪಡಿತರ ಅಕ್ಕಿ ಅಕ್ರಮ ಸಾಗಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:47 IST
Last Updated 12 ಡಿಸೆಂಬರ್ 2013, 8:47 IST

ಬಂಗಾರಪೇಟೆ: ತಮಿಳುನಾಡಿನ ಪಡಿತರ ಅಕ್ಕಿ ಅಕ್ರಮವಾಗಿ ಪಟ್ಟಣಕ್ಕೆ ಸಾಗಣೆ ಆಗುತ್ತಿರುವುದನ್ನು  ತಡೆಯವ ಸಲು­ವಾಗಿ ತಮಿಳುನಾಡು ಪೊಲೀಸರು ಬುಧವಾರ ಬಂಗಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಗೌಪ್ಯವಾಗಿ ಸಭೆ ನಡೆಸಿ, ಅಕ್ರಮವಾಗಿ ಗಡಿಯೊಳಕ್ಕೆ ಬರುವ ಅಕ್ಕಿಯನ್ನು ಖರೀದಿ­ಸದಂತೆ ಅಕ್ಕಿ ಗಿರಣಿ ಮಾಲೀಕರಿಗೆ ಸೂಚಿಸಿದ್ದಾರೆ.

ತಮಿಳುನಾಡಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಶೇಷ ವರಿಷ್ಠಾಧಿಕಾರಿ ಸ್ವಾಮಿನಾಥನ್ ನೇತೃತ್ವ­ದಲ್ಲಿ ಸಭೆ ನಡೆದಿದೆ. 

ತಮಿಳುನಾಡು ಸರ್ಕಾರ ಬಡವರಿಗೆ ತಿಂಗಳಿಗೆ 38 ಸಾವಿರ ಟನ್‌ ಕುಸುಬಲ ಅಕ್ಕಿ ಉಚಿತವಾಗಿ ನೀಡುತ್ತಿದೆ. ಹಲ ಮಾರ್ಗಗಳ ಮೂಲಕ ಈ ಅಕ್ಕಿ ಬಂಗಾರಪೇಟೆಗೆ ಸೇರುತ್ತಿದೆ. ತಮಿಳುನಾಡಿನಲ್ಲಿ ಕಡಿಮೆ ದರಕ್ಕೆ ಕೊಂಡು  ಅದೇ  ಅಕ್ಕಿಯನ್ನು ಗಿರಣಿ­ಯಲ್ಲಿ ಪಾಲಿಷ್‌ ಮಾಡಿ 25ರಿಂದ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ದಂಧೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದೇಶದ ಅನ್ವಯ ಅಕ್ಕಿ ಗಿರಣಿ ಮಾಲೀಕರ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದು ಸ್ವಾಮಿನಾಥನ್‌ ತಿಳಿಸಿದರು.

ಅಕ್ರಮವಾಗಿ ಅಕ್ಕಿ ಸಾಗಣೆ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದು, ಇಂಥ ಕೃತ್ಯಗಳು ನಡೆಯದಂತೆ ಅಕ್ಕಿ ಗಿರಣಿ ಮಾಲೀಕರು ಸಹಕರಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು ಎಂದು ಸಿಪಿಐ ವೆಂಕಟಾಚಲಪತಿ ತಿಳಿಸಿದರು. ಅಕ್ರಮ ಅಕ್ಕಿ ಸಾಗಣೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಪಟ್ಟಣದ ವ್ಯಕ್ತಿಯೊಬ್ಬರನ್ನು ತಮಿಳು­ನಾಡು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ವಿಶೇಷ ವರಿಷ್ಠಾಧಿಕಾರಿ ಸ್ವಾಮಿ­ನಾಥನ್‌ ಅವರೊಂದಿಗೆ ಇಬ್ಬರು ಡಿವೈಎಸ್‌ಪಿ, 15 ಮಂದಿ ಪೊಲೀಸರು ಸೇರಿದಂತೆ ಒಟ್ಟು 21ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.