ADVERTISEMENT

ಅನಂತ ಕುಮಾರ್ ಹೆಗ್ಗಡೆ ರಾಜೀನಾಮಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 7:26 IST
Last Updated 27 ಡಿಸೆಂಬರ್ 2017, 7:26 IST

ಕೋಲಾರ: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸದಸ್ಯರು ಧರಣಿ ನಡೆಸಿದರು. ಧರಣಿಗೂ ಮೊದಲು ನಗರದ ಮೆಕ್ಕೆ ವೃತ್ತದಲ್ಲಿ ಸಮಿತಿಯ ಸದಸ್ಯರು ಅನಂತ ಕುಮಾರ್ ಹೆಗಡೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ತಪಡಿಸಿದರು.

ಸಮಿತಿ ಮುಖಂಡ ಟಿ.ವಿಜಯ ಕುಮಾರ್ ಮಾತನಾಡಿ, ‘ಸಂವಿಧಾ ನವನ್ನು ಬದಲಾಯಿಸಬೇಕು. ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ದ್ದಾರೆ’ ಎಂದು ಹೇಳಿದರು.

ಜನಪ್ರತಿನಿಧಿಯಾಗಿ ಇದೇ ಮೊದಲ ಭಾರಿ ಸಂವಿಧಾನ ಬದಲಾಯಿಸುತ್ತೇನೆ ಎಂದು ಅನಂತ್‌ ಕುಮಾರ್ ಹೆಗಡೆ ಹೇಳಿಕೆ ನೀಡುವ ಮೂಲಕ ಬಿಜೆಪಿ ತಲೆ ತಗ್ಗಿಸುವಂತೆ ಮಾಡಿದೆ. ಸಂವಿಧಾನ ಯಾರ ಒಬ್ಬರ ಆಸ್ತಿಯಲ್ಲ. ಇಡೀ ವಿಶ್ವವೇ ಭಾರತ ಸಂವಿಧಾನದ ಮಾರ್ಗದಲ್ಲಿ ಸರ್ಕಾರಗಳನ್ನು ನಡೆಸುತ್ತಿವೆ. ಇಂತಹ ಪವಿತ್ರ ಸಂವಿಧಾನದ ಬಗ್ಗೆ ಹೇಳಿಕೆ ನೀಡಲು ನಾಚಿಕೆಯಾಗಬೇಕು ಎಂದರು.

ADVERTISEMENT

ಸಚಿವ ಅನಂತ ಕುಮಾರ್‌ ಹೆಗಡೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕಿದೆ. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ರ‍್ಯಾಲಿಗೆ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಇತ್ತೀಚಿನ ದಿನಗಳಲ್ಲಿ ಸಂವಿಧಾನ ಹಾಗೂ ಮೀಸಲಾತಿಯ ಮೂಲ ಆಶಯ ಗಳನ್ನು ದಮನ ಮಾಡಲು ಮುಂದಾ ಗಿರುವುದು ದೇಶದ ಶೇ 70ರಷ್ಟು ಬಹುಸಂಖ್ಯಾತರ ಮನಸ್ಸುಗಳಿಗೆ ನೋವು ಉಂಟುಮಾಡಿದೆ. ಹೀಗಾಗಿ ಕೂಡಲೇ ಬಿಜೆಪಿಯಿಂದ ಅವರನ್ನು ಉಚ್ಚಾಟನೆ ಮಾಡಬೇಕು ಎಂದು
ಒತ್ತಾಯಿಸಿದರು. ಸಮಿತಿ ಸದಸ್ಯರಾದ ನಾರಾಯಣ ಸ್ವಾಮಿ, ಅಂಬರೀಶ್, ವೆಂಕಟೇಶ್, ಬಾಬು, ನಗರಸಭೆ ಸದಸ್ಯ ಅಪ್ರೋಜ್‌ಪಾಷ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.