ADVERTISEMENT

ಅಭ್ಯರ್ಥಿಗಳ ಬಿ-ಫಾರಂ ಕನಸು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:40 IST
Last Updated 14 ಮಾರ್ಚ್ 2011, 8:40 IST

ಬಂಗಾರಪೇಟೆ: ಉಪ ಚುನಾವಣೆಗೆ ಶನಿವಾರ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಟಿಕೆಟ್‌ಗಾಗಿ  ವಿವಿಧ ಪಕ್ಷಗಳ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರ ಓಡಾಟ ತೀವ್ರಗೊಂಡಿದೆ. ಕಳೆದ 3-4 ತಿಂಗಳಿನಿಂದಲೂ ಚುನಾವಣಾ ಅಧಿಸೂಚನೆ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಚುನಾವಣೆ ಎದುರಿಸುವುದಕ್ಕಿಂತಲೂ ಸದ್ಯಕ್ಕೆ ಟಿಕೆಟ್ ಪಡೆಯುವುದೇ ಅಗ್ನಿ ಪರೀಕ್ಷೆಯೆನಿಸಿದೆ.

ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಸಿಲುಕಿ ಕಾಂಗ್ರೆಸ್ ಶಾಸಕ ಎಂ.ನಾರಾಯಣಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಸ್ಥಾನಕ್ಕೆ ಈಗ ಉಪ ಚುನಾವಣೆ ನಡೆಯುತ್ತಿದೆ.ಕಾಂಗ್ರೆಸ್ ತೈಜಿಸಿ ಬಂದ ಎಂ.ನಾರಾಯಣಸ್ವಾಮಿ ಅವರನ್ನೇ ಪಕ್ಷದ ಅಭ್ಯರ್ಥಿಯೆಂದು ಬಿಜೆಪಿ ಈ ಹಿಂದೆಯೇ ಬಿಂಬಿಸಿತ್ತು.

ಬಿಜೆಪಿ ಕೋರ್ ಕಮಿಟಿಯಲ್ಲೂ ಅವರನ್ನೇ ಅಭ್ಯರ್ಥಿ ಎಂದು ನಿರ್ಧರಿಸಲಾಗಿದೆ. ಹೀಗಾಗಿ ಎರಡು ತಿಂಗಳ ಹಿಂದಿನಿಂದಲೇ ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಾ ಪರೋಕ್ಷ ಪ್ರಚಾರಕ್ಕೆ ಅವರು ಇಳಿದಿದ್ದಾಗಿದೆ.

ಇನ್ನು ಕಾಂಗ್ರೆಸ್‌ನಲ್ಲಿ ಅಂತಿಮ ಗಳಿಗೆಯವರಿಗೆ ಬಿ ಫಾರಂಗಾಗಿ ಕಾಯುವ ಸ್ಥಿತಿ ಇದೆ. ಪರಿಶಿಷ್ಟ ಜಾತಿಯ ಬಲಗೈ ಅಭ್ಯರ್ಥಿಗೆ ಟಿಕೆಟ್ ನೀಡುವ ಸಂಭವ ಹೆಚ್ಚು ಎಂದು ಕೇಳಿಬಂದಿದೆ. ಇನ್ನು ಜೆಡಿಎಸ್‌ನಲ್ಲಿ ಬೋವಿ ಜನಾಂಗದ ಶ್ರೀಕೃಷ್ಣ, ಮುನಿಮಾರಪ್ಪ ‘ರೇಸ್’ನಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಎಸ್.ಎನ್.ರೆಸಾರ್ಟ್ ಮಾಲೀಕ ಕೆ.ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರ, ಬೆಳಗಾನಹಳ್ಳಿ ಮುನಿವೆಂಕಟಪ್ಪ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ.

ಇವರ ಜೊತೆಯಲ್ಲಿ ಜೆ.ಸಿ.ಬಿ.ನಾರಾಯಣಪ್ಪ, ಮಾಜಿ ಶಾಸಕ ಸಿ.ವೆಂಕಟೇಶಪ್ಪ, ಕೆ.ಎಂ.ನಾರಾಯಣಸ್ವಾಮಿ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಒಟ್ಟಾರೆ ಸದ್ಯಕ್ಕೀಗ ಅಭ್ಯರ್ಥಿಗಳು ಯಾರಾಗುತ್ತಾರೆ ಎಂಬುದು ಕ್ಷೇತ್ರದಲ್ಲಿ ಚರ್ಚೆಯ ವಿಷಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.