ಮಾಲೂರು: ಕಲುಷಿತ ತ್ಯಾಜ್ಯ ಸೇವಿಸಿ ಸಾವನ್ನಪ್ಪಿದ ಸೀಮೆ ಹಸುಗಳ ಮಾಲೀಕರಿಗೆ ಕ್ಲೋರೈಡ್ ಅಲೈನ್ಸ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯವರು ಪರಿಹಾರ ನೀಡಬೇಕು ಎಂದು ತಹಶೀಲ್ದಾರ್ ಹನುಮಂತರಾಯ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸೂಚಿಸಲಾಯಿತು.
ತಾಲ್ಲೂಕಿನ ಸೀತನಾಯಕನಹಳ್ಳಿ ಬಳಿ ಇರುವ ಕ್ಲೋರೈಡ್ ಅಲೈನ್ಸ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯಿಂದ ಹೊರಬರುವ ಕಲುಷಿತ ತ್ಯಾಜ್ಯ ಸೇವಿಸಿ, ಇತ್ತೀಚೆಗೆ ಮೃತಪಟ್ಟಿದ್ದ ಹಸುಗಳ ಮಾಲೀಕರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಈ ಸಂಬಂಧ ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರೈತ ಸಂಘ, ಗ್ರಾಮಸ್ಥರು ಮತ್ತು ಕಾರ್ಖಾನೆಯ ಮಾಲೀಕರ ಸಭೆ ನಡೆಯಿತು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎ.ಅಶ್ವಥರೆಡ್ಡಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸಿದರೆ ಯಾವುದೇ ಅಭ್ಯಂತರವಿಲ್ಲ. ಪುನಃ ಸಭೆ, ಚರ್ಚೆ ಮಾಡುವ ಅಗತ್ಯವಿಲ್ಲ. ಜಿಲ್ಲಾಧಿಕಾರಿ ಆದೇಶವಾಗಿ ಎರಡು ತಿಂಗಳಾದರೂ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದರು.
ಕಾರ್ಖಾನೆಗೆ ಬೀಗ ಹಾಕದಂತೆ ತಡೆದಿರುವುದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದರು. ಕಾರ್ಖಾನೆ ಕಲುಷಿತ ತ್ಯಾಜ್ಯ ಸೇವಿಸಿ ಸಾವನ್ನಪ್ಪಿದ ಹಸುಗಳಿಗೆ ಜಿಲ್ಲಾಧಿಕಾರಿ ಆದೇಶದಂತೆ ಸೀಮೆ ಹಸುಗಳನ್ನು ನೀಡಲು ತೀರ್ಮಾನವಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಹನುಮಂತರಾಯ, ಸೀತನಾಯಕನಹಳ್ಳಿಯ ನಾಗಾರ್ಜನ್, ಸೋಮಶೇಖರ್ ರೆಡ್ಡಿ, ಭದ್ರಾರೆಡ್ಡಿ, ರಾಜಾರೆಡ್ಡಿ, ಮಂಜುನಾಥ್ ರೆಡ್ಡಿ, ಮಲ್ಲೇಶ್ ರೆಡ್ಡಿ, ರವೀಂದ್ರ ರೆಡ್ಡಿ, ರಾಮಕ್ಕ, ಚಿಕ್ಕಸೊಣ್ಣಪ್ಪ ಮತ್ತು ಚಂದ್ರಾರೆಡ್ಡಿಗೆ ಸೀಮೆಹಸು ನೀಡಲು ತೀರ್ಮಾನಿಸಲಾಗಿದೆ ಎಂದರು.
ಪಶುವೈದ್ಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್ ಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ಶಿವಸ್ವಾಮಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಡ್ಶೆಟ್ಟಹಳ್ಳಿ ರಮೇಶ್, ಗೌರವಾಧ್ಯಕ್ಷ ಚನ್ನವೀರದೇವರು, ಜಿ.ಪಂ. ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಖಾನೆ ಆಡಳಿತಾಧಿಕಾರಿ ಜೋಸೆಫ್, ದಾಸು, ಸದಾನಂದ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.