ADVERTISEMENT

ಕುಡಿಯುವ ನೀರಿಗಾಗಿ ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 8:00 IST
Last Updated 11 ಜುಲೈ 2012, 8:00 IST

ಕೋಲಾರ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು, ನೀರು ಪೂರೈಕೆಯಲ್ಲಿ ತಾರತಮ್ಯ ಮಾಡತ್ತಿರುವ ವಾಲ್ವ್‌ಮನ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರಸಭೆಯಲ್ಲಿ ಮಂಗಳವಾರ 7-8ನೇ ವಾರ್ಡ್‌ಗೆ ಸೇರಿದ ಗಲ್‌ಪೇಟೆ ನಿವಾಸಿಗಳು ಆಯುಕ್ತ ಮಹೇಂದ್ರಕುಮಾರ್ ಜೈನ್ ಮತ್ತು ಸದಸ್ಯ ರೌತ್ ಶಂಕರಪ್ಪ ಅವರ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಗಲ್‌ಪೇಟೆಯಿಂದ ಬೆಳಿಗ್ಗೆ 11ರ ವೇಳೆಗೆ ಗುಂಪಾಗಿ ಬಂದ ನಿವಾಸಿಗಳು ನೇರವಾಗಿ ಆಯುಕ್ತರ ಕೊಠಡಿಗೆ ತೆರಳಿ, ಒಂದು ವರ್ಷದಿಂದ ಕೊಳವೆಬಾವಿಗೆ ಪಂಪ್, ಮೋಟರ್ ಅಳವಡಿಸದೆ ನೀರಿಗೆ ಪರದಾಡುವಂತಾಗಿದೆ. ಇರುವಷ್ಟು ನೀರನ್ನು ಸಮಾನವಾಗಿ ವಿತರಿಸಬೇಕಾದ ವಾಲ್ವ್‌ಮನ್‌ಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಬೀದಿ ದೀಪಗಳು ಕೆಟ್ಟು ಹಲವು ದಿನಗಳಾದರೂ ದುರಸ್ತಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಸ್ಯೆ ಹೇಳಲು ಹಲವರು ನೆರೆದಿರುವ ಕಾರಣ, ಆಯುಕ್ತರು ತಮ್ಮ ಕೊಠಡಿಯಿಂದ ಈಚೆ ಬಂದು ಸಭಾಂಗಣದಲ್ಲಿ ಮನವಿ ಆಲಿಸಬೇಕು ಎಂದು ನಿವಾಸಿಗಳು ಕೋರಿದರು. ಅದರಂತೆ ಸಭಾಂಗಣಕ್ಕೆ ಬಂದ ಆಯುಕ್ತರ ಮಂದೆ ನಿವಾಸಿಗಳು, ನಗರಸಭೆ ಸದಸ್ಯರಾದ ರೌತ್ ಶಂಕರಪ್ಪ ಮತ್ತು ಜ್ಯೋತಿಯವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಶಂಕರಪ್ಪ ಸಮಾಧಾನದ ಮಾತುಗಳನ್ನುಆಡಲು ಮುಂದಾದರೂ ಜನ ಕೇಳಿಸಿಕೊಳ್ಳಲು ತಯಾರಿರಲಿಲ್ಲ.

ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದ ಬಳಿಕ ನಿವಾಸಿಗಳು ನಿರ್ಗಮಿಸಿದರು. ಪ್ರಮುಖರಾದ ಮನೋಹರ್,ಲಕ್ಷ್ಮಣಮೂರ್ತಿ, ಸುಧಾಕರ್, ಶಂಕರ್, ರಾಮು, ರಾಜಣ್ಣ, ಬಾಬು, ಸಾವಿತ್ರಮ್ಮ, ಚೆಲುವಮ್ಮ, ಜಯಲಕ್ಷ್ಮಿ, ಲಲಿತಾ, ಗಂಗಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.