ಮಾಲೂರು: ತಾಲ್ಲೂಕಿನ ಚಾಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕೆರೆ ಒತ್ತುವರಿ ತೆರವಿಗೆ ತಹಶೀಲ್ದಾರ್ ಡಾ.ಬಿ.ಸುಧಾ ಪಾಯ್ಸ್ ಚಾಲನೆ ನೀಡಿ ದರು.
ನಂತರ ಮಾತನಾಡಿ, ತಾಲ್ಲೂಕಿನ ಕೆರೆಯಂಗಳ ಮತ್ತು ರಾಜಕಾಲುವೆ ಒತ್ತುವರಿ ಮಾಡಿಕೊಂಡ ರೈತರು ತಾವಾಗಿಯೇ ತೆರವುಗೊಳಿಸದಿದ್ದಲ್ಲಿ ಸರ್ವೇ ನಡೆಸಿ, ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದರು.
ತಾಲ್ಲೂಕಿನಲ್ಲಿ 340 ಕೆರೆಗಳಿವೆ. ಕೆಲವು ಕೆರೆಗಳ ಅಂಗಳವನ್ನು ಒತ್ತುವರಿ ಮಾಡಿಕೊಂಡು, ರಾಜಕಾಲುವೆಗಳನ್ನು ಮುಚ್ಚಿರುವುದರಿಂದ ಹರಿಯುವ ನೀರು ಸ್ಥಗಿತಗೊಂಡಿದೆ. ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಹಂತ ಹಂತವಾಗಿ ಕೆರೆಗಳ ಅಂಗಳ ಮತ್ತು ರಾಜ ಕಾಲುವೆ ತೆರವುಗೊಳಿಸಲಾಗುವುದು ಎಂದರು.
ತಾಲ್ಲೂಕಿನ ಚಾಕನಹಳ್ಳಿ ಗ್ರಾಮದ ಸಮೀಪವಿರುವ ಕೆರೆ ಅಂಗಳ ಒಟ್ಟು 19 ಎಕರೆ 16 ಗುಂಟೆ ವಿಸ್ತೀರ್ಣವಿದ್ದು, ಒಂದು ಎಕರೆಗೂ ಹೆಚ್ಚು ಒತ್ತುವರಿಯಾಗಿದೆ. ಸರ್ವೇ ನಡೆಸಿ, ಒತ್ತುವರಿ ತೆರವು ಮಾಡಿ ಜೆಸಿಬಿ ಯಂತ್ರದಿಂದ ಕಾಲುವೆ ತೆಗೆಸುವ ಮೂಲಕ ಗಡಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಕಂದಾಯಾಧಿಕಾರಿ ಬೀರಪ್ಪ, ಗ್ರಾಮ ಲೆಕ್ಕಿಗರಾದ ಶಂಕರ್, ರವಿ ಬಂಡ್ಯಾಪುರ್, ಭೂಮಾಪಕ ಲಕ್ಷ್ಮಣ್, ವೆಂಕಟೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.