ಕೋಲಾರ: ಕಟ್ಟಡ ನಿರ್ಮಾಣ ಕಾರ್ಮಿಕರು ಹಲವು ಬಗೆಯಲ್ಲಿ ಕೌಶಲ್ಯವಂತರಾದರೆ ಮಾತ್ರ ಕ್ಷೇತ್ರದಲ್ಲಿ ಬೇಡಿಕೆ ಉಳಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಭಿಪ್ರಾಯ ಪಟ್ಟರು.
ನಗರದ ಹೊರವಲಯದ ಹೊನ್ನೇನಹಳ್ಳಿಯಲ್ಲಿ ಕೆನರಾಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರವು ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಕೌಶಲ್ಯ ಅಭಿವೃದ್ಧಿ ಶಾಲೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಗಾರೆ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕಟ್ಟಡದ ಕೆಲಸ ಎಂದರೆ ಗಾರೆ ಕೆಲಸವಷ್ಟೇ ಅಲ್ಲ, ಉತಮ ಗುಣಮಟ್ಟದ ಇಟ್ಟಿಗೆ, ಮರಳಿನ ಆಯ್ಕೆ, ಮರ ಗೆಲಸ, ಮೋಲ್ಡಿಂಗ್, ಟೈಲ್ಸ್ ಹಾಕುವುದು, ಕಟ್ಟಡ ನಿರ್ಮಾಣದ ನೀಲನಕ್ಷೆ ಅರ್ಥಮಾಡಿಕೊಳ್ಳುವುದು, ನಿರ್ಮಾಣ ಸಾಮಗ್ರಿಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಬಗೆಯ ಕೌಶಲ್ಯಾಧಾರಿತವಾದ ಕೆಲಸಗಳಿರುತ್ತವೆ. ಅವುಗಳಲ್ಲಿ ಪರಿಶ್ರಮ ಸಾಧಿಸಿದರೆ ಮಾತ್ರ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅನನ್ಯತೆ ಸಾಧಿಸಬಹುದು ಎಂದರು.
ಕಟ್ಟಡ ನಿರ್ಮಾಣದ ಕೆಲಸದಲ್ಲಿ ಮೇಸ್ತ್ರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಮಾಲೀಕರು ಮತ್ತು ಸಂಸ್ಥೆಗೆ ವಿಶ್ವಾಸಾರ್ಹವಾಗಿ ಕೆಲಸ ಮಾಡಬೇಕಾಗುತ್ತದೆ. ಹಲವರಿಂದ ಕೆಲಸ ಮಾಡಿಸಬೇಕಾಗುತ್ತದೆ. ಇದೂ ಕೂಡ ಕೌಶಲ್ಯದ ಒಂದು ಪ್ರಮುಖ ಭಾಗ. ಅದನ್ನು ಅರಿತು ಮುಂದುವರಿದರೆ ಮಾತ್ರ ಯಶಸ್ಸನ್ನು ಗಳಿಸಬಹುದು ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದ ಕಾರ್ಮಿಕ ಮಂಡಳಿಯು ಸ್ಥಾಪನೆಯಾಗಿದ್ದು, ಅದರಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಮುಂದಾಗಬೇಕು. ಸ್ವಾಸ್ಥ ಬಿಮಾ ಯೋಜನೆ ಲಾಭವನ್ನು ಎಲ್ಲರೂ ಪಡೆಯಬೇಕು ಎಂದು ನುಡಿದರು.
ಜಿಲ್ಲಾ ನಿರ್ಮಿತಿ ಕೇಂದ್ರದ ನಾರಾಯಣಗೌಡ, ಅಲ್ಟ್ರಾಟೆಕ್ ಸಿಮೆಂಟ್ ಹಿರಿಯ ವ್ಯವಸ್ಥಾಪಕ ಆರ್.ಎನ್.ಎಂ.ದೇಸಾಯಿ, ಉಪ ವ್ಯವಸ್ಥಾಪಕ ಗೋರಕ್ಷನಾಥ, ಜಿಲ್ಲಾ ತಾಂತ್ರಿಕ ಅಧಿಕಾರಿ ಹರ್ಷವರ್ಧನ್ ವೇದಿಕೆಯಲ್ಲಿದ್ದರು.
ಇಂದು: ಕಾರ್ಯಾಗಾರದ ಎರಡನೇ ದಿನವಾದ ಗುರುವಾರ ಸೀಲಿಂಗ್ ಪ್ಲಾಸ್ಟರ್ ಮಾಡುವುದು, ಬಾಗಿಲು-ಕಿಟಕಿ ಅಳವಡಿಸುವುದು, ಕಾಂಕ್ರಿಟ್ ಬಗೆಗಳು, ಪರ್ಯಾಯ ನಿರ್ಮಾಣ ಸಾಮಗ್ರಿಗಳ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.