ADVERTISEMENT

ಕ್ಯಾನ್ಸರ್ ತಪಾಸಣೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 6:10 IST
Last Updated 27 ಏಪ್ರಿಲ್ 2012, 6:10 IST

ಕೋಲಾರ:  ಜಿಲ್ಲೆಯಲ್ಲಿ ಗರ್ಭಕೊರಳಿನ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಿ.ಕುಪ್ಪುಸ್ವಾಮಿ ತಿಳಿಸಿದರು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಜಿಲ್ಲಾಸ್ಪತ್ರೆ, ಜಿಲ್ಲಾ ಎನ್‌ಸಿಡಿಸೆಲ್, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಸಹಯೋಗದಲ್ಲಿ ನಗರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕರ್ನಾಟಕದಲ್ಲಿ ಪ್ರತಿ ವರ್ಷ 35 ಸಾವಿರ ಹೊಸ ಕ್ಯಾನ್ಸರ್ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಒಟ್ಟು ಕ್ಯಾನ್ಸರ್ ರೋಗಿಗಳ ಪೈಕಿ ಶೇ.50ರಷ್ಟು ಗಂಡಸರು ಹಾಗೂ ಶೇ.25ರಷ್ಟು ಹೆಂಗಸರು ತಂಬಾಕು ಸೇವನೆಯಿಂದಲೇ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದರು.

ಕ್ಯಾನ್ಸರ್‌ಗೆ ಸಂಬಂಧಿಸಿದ ಯಾವುದೇ ಚಿಹ್ನೆಗಳು ಕಂಡು ಬಂದಲ್ಲಿ ಕೂಡಲೇ ವೈದರನ್ನು ಸಂಪರ್ಕಿಸಬೇಕು. ಸ್ತ್ರೀಯರಲ್ಲಿ ಅತಿಯಾದ ರಕ್ತ ಅಥವಾ ಇತರೆ ಸ್ರಾವಗಳು, ಗುಣವಾಗದ ಕೆಮ್ಮು ಅಥವಾ ಗೊಗ್ಗರು ಧ್ವನಿ, ನುಂಗಿದ ಕುತ್ತಿಗೆ, ಎದೆಯಲ್ಲಿ ಅಡಚಣೆಯಂಥ ಸಮಸ್ಯೆಗಳಿದ್ದರೆ ಕೂಡಲೇ ವೈದ್ಯರನ್ನು ಕಾಣಬೇಕು ಎಂದು ಕಿವಿಮಾತು ಹೇಳಿದರು.

ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಕಾಶ್‌ಕುಮಾರ್, ಕ್ಯಾನ್ಸರ್ ರೋಗವನ್ನು ಆರಂಭದಲ್ಲೆ ಪತ್ತೆ ಹಚ್ಚುವುದು ಅಗತ್ಯ. ಆ ನಿಟ್ಟಿನಲ್ಲಿ ಸ್ಥಳೀಯ ವೈದ್ಯರು, ಶುಶ್ರೂಷಕಿಯರಿಗೆ ಅಗತ್ಯ ಅರಿವು ಮೂಡಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಡಾ.ಇಬ್ರಾಹಿಂ ನಾಗ್‌ಪೂರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶ್ರೀಧರಮೂರ್ತಿ, ಆಸ್ಪತ್ರೆಯ ಪ್ರಯೋಗಾಲಯ ಮುಖ್ಯಸ್ಥ  ಡಾ.ಪಿ.ಎಸ್.ಕೃಷ್ಣಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಲತಾ ಪ್ರಮೀಳಾ, ಕಿದ್ವಾಯಿ ಸಂಸ್ಥೆಯ ಡಾ.ಮಹಂತೇಶ್, ಪ್ರಮೀಳಾ, ಮೆಹಬೂಬ್, ರೋಟರಿಯ ವಿ.ಪಿ.ಸೋಮಶೇಖರ್, ಡಾ.ಸುಮಾಪಾಟೀಲ್, ಡಾ.ಸುಧಾ ಉಪಸ್ಥಿತರಿದ್ದರು.

ಅಪಘಾತ: ಗಾಯ
ಗೌರಿಬಿದನೂರು:
ಚಾಲಕನ ನಿಯಂತ್ರಣ ತಪ್ಪಿ ಆಟೊರಿಕ್ಷಾ ಉರುಳಿಬಿದ್ದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.