ಕೋಲಾರ: ಜೈವಿಕ ಗೊಬ್ಬರದ ಹೆಸರಿನಲ್ಲಿ ನಕಲಿ ಗೊಬ್ಬರ ನೀಡಿ ರೈತರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು ನಗರದಲ್ಲಿ ಬುಧವಾರ ಹೈದರಾಬಾದ್ ಮೂಲದ ನವಭಾರತ ಫರ್ಟಿಲೈಸರ್ಸ್ ಕಂಪೆನಿಯ 120 ಮೂಟೆ ಜೈವಿಕ ಗೊಬ್ಬರವನ್ನು ಕೃಷಿ ಇಲಾಖೆ ವಶಕ್ಕೆ ನೀಡಿದರು.
ಜೈವಿಕ ಗೊಬ್ಬರದ ಬೇಡಿಕೆ ಇಟ್ಟ ರೈತ ಸಂಘದ ಪ್ರಮುಖರು, ಕಾರ್ಯಾಚರಣೆ ನಡೆಸಿ ಗೊಬ್ಬರವನ್ನು ತುಮಕೂರಿನಿಂದ ತರಿಸಿಕೊಂಡು ನಂತರ ಇಲಾಖೆ ವಶಕ್ಕೆ ನೀಡಿದರು.
ಇಟ್ಟಿಗೆ ಕಾರ್ಖಾನೆಯ ಸುಟ್ಟ ಬೂದಿಗೆ ರಸಗೊಬ್ಬರದ ವಾಸನೆ ಸೋಂಕಿಸಿ ರೈತರಿಗೆ 50 ಕೆ.ಜಿ. ಮೂಟೆಗೆ 700 ರೂಪಾಯಿಯಂತೆ ಸುಮಾರು 6 ತಿಂಗಳಿಂದ ಜಿಲ್ಲೆಯಾದ್ಯಂತ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ ದೂರನ್ನು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರೋಪಿಸಿದರು.
ಗೊಬ್ಬರದ ಮೂಟೆಗಳುಳ್ಳ ವಾಹನವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಾಗಿಸಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಿಕ್ಕಣ್ಣ ಮತ್ತು ಸಹಾಯಕ ನಿರ್ದೇಶಕಿ ಗಾಯತ್ರಿ ದೇವಿಯವರಿಗೆ ಮಾಹಿತಿ ನೀಡಿದರೂ ಅವರು ಸಕಾಲಕ್ಕೆ ಸ್ಪಂದಿಸಲಿಲ್ಲ. ಆ ನಂತರ ಡಿವೈಎಸ್ಪಿ ಶ್ರೀಹರಿ ಬರಗೂರು ಅವರಿಗೆ ಮಾಹಿತಿ ನೀಡಲಾಯಿತು ಎಂದು ಹೇಳಿದರು.
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಿ.ಕೆ.ರವಿಯವರಿಗೂ ಸಂಘದ ಪ್ರಮುಖರು ವಿವರಣೆ ನೀಡಿದರು. ಕೂಡಲೇ ಕೃಷಿ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿದ ಜಿಲ್ಲಾಧಿಕಾರಿ ವಾಹನ ಮತ್ತು ಸಾಮಗ್ರಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಸೂಚಿಸಿದರು.
ಕೃಷಿ ಅಧಿಕಾರಿ ಮೀನಾಕ್ಷಿ ಮತ್ತಿತರ ಅಧಿಕಾರಿಗಳು ಮಹಜರು ನಡೆಸಿ ವಾಹನ ಮತ್ತು ಸಾಮಗ್ರಿಯನ್ನು ವಶಕ್ಕೆ ಪಡೆದರು.
ಸಂಘದ ಪ್ರಮುಖರಾದ ನಾರಾಯಣಗೌಡ, ಶ್ರೀನಿವಾಸಗೌಡ, ಮುನೇಗೌಡ, ಶಿವಾರೆಡ್ಡಿ, ವೆಂಕಟೇಶಗೌಡ, ಆಂಜಿನಪ್ಪ, ನಾಗರಾಜ್, ಪುರುಷೋತ್ತಮ್, ಕೃಷ್ಣ, ಮಂಜುನಾಥ್, ರಾಜೇಶ್, ಆವಲಪ್ಪ, ನಾರಾಯಣಸ್ವಾಮಿ ಉಪಸ್ಥಿತರಿದ್ದರು,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.