ADVERTISEMENT

ಟ್ಯಾಂಕರ್ ಮಾಫಿಯಾಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:25 IST
Last Updated 24 ಏಪ್ರಿಲ್ 2012, 8:25 IST

ಕೋಲಾರ: ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳಲು ನೀರಿನ ಸಮಸ್ಯೆ ತೀವ್ರಗೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಟ್ಯಾಂಕರ್ ಮಾಲೀಕರೇ ಕಾರಣ. ಈ ನಿಟ್ಟಿನಲ್ಲಿ ಟ್ಯಾಂಕರ್ ಮಾಫಿಯಾವನ್ನು ನಿಯಂತ್ರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಹೇಳಿದರು.
ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಶಿವಾಜಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಪಂಪ್‌ಹೌಸ್‌ಗಳ ಪ್ಯಾನೆಲ್ ಬೋರ್ಡ್‌ಗಳನ್ನು ಒಡೆಯುವುದು, ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳನ್ನು ಹಮ್ಮಿಕೊಂಡು ನೀರಿನ ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ ಎಂದರು.

ಅಕ್ರಮ: ನಗರಸಭೆಗೆ ಭಾನುವಾರ ಬೆಳಿಗ್ಗೆ 6 ಗಂಟೆಗೆ ಭೇಟಿ ನೀಡಿದಾಗ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಇರಲಿಲ್ಲ. 2 ಲೋಡ್ ಟ್ಯಾಂಕರ್ ನೀರು ಪೂರೈಕೆ ಬಗ್ಗೆ ದಾಖಲೆ ಪುಸ್ತಕದಲ್ಲಿ ನಮೂದಿಸಲಾಗಿತ್ತು. ವಿಚಾರಿಸಿದಾಗ ಆ ನೀರು ಪೂರೈಕೆಯಾಗದೇ ಇರುವುದು ಬೆಳಕಿಗೆ ಬಂತು. ಶನಿವಾರ 171 ಟ್ಯಾಂಕರ್ ಲೋಡ್ ನೀರ ಪೂರೈಸಲಾಗಿದೆ ಎಂದು ನಮೂದಾಗಿತ್ತು. ಆದರೆ ಪೂರೈಕೆಯಾಗಿದ್ದುದು 80 ಲೋಡ್ ಮಾತ್ರ. ಹೀಗೆ ಸುಳ್ಳು ಲೆಕ್ಕ ದಾಖಲಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಅಕ್ರಮಗಳ ಬಗ್ಗೆ ತಾವು ಮತ್ತು ಜಿಲ್ಲಾಧಿಕಾರಿಗಳು ಒಟ್ಟಾಗಿ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇವೆ. ಜನ ನಮ್ಮ ಕಡೆಗೆ ಕೋಪದಿಂದ ನೋಡುತ್ತಿದ್ದಾರೆ ಎಂದು ಅರಿವಿಗೆ ಬಂದಿದೆ ಎಂದರು.
ನಗರದಲ್ಲಿ ನೀರು ಪೂರೈಕೆಗಾಗಿ ಅಮ್ಮೇರಹಳ್ಳಿ ಕೆರೆ ಹಾಗೂ ಮಡೇರಹಳ್ಳಿ ಕೆರೆಗಳಲ್ಲಿ ಹದಿನೈದು ಕೊಳವೆ ಬಾವಿಗಳಿಗೆ ಹಾಕಲಾಗಿದ್ದ ವಿದ್ಯುತ್ ಲೈನ್ ಕಳುವಾಗಿದೆ. ಇನ್ನು ಎರಡು ದಿನಗಳಲ್ಲಿ ಹೊಸ ವಿದ್ಯುತ್ ಲೈನ್ ಕಲ್ಪಿಸಿ ಪಂಪ್ ಮೋಟರ್ ಅಳವಡಿಸಿ ನೇರವಾಗಿ ಓವರ್‌ಹೆಡ್ ಟ್ಯಾಂಕ್‌ಗೆ ನೀರನ್ನು ಪಂಪ್ ಮಾಡಬೇಕಾಗಿದೆ.

ವಿದ್ಯುತ್ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಆಯುಕ್ತರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅದರಿಂದ ಕನಿಷ್ಠ ಎಂಟರಿಂದ ಹತ್ತು ವಾರ್ಡ್‌ಗಳಿಗೆ ನೀರು ಲಭ್ಯವಾಗಲಿದೆ ಎಂದು ಹೇಳಿದರು.ಟ್ಯಾಂಕರ್‌ಗಳಿಂದ ನೀರು ಖರೀದಿಸಿ ಅಮ್ಮೇರಹಳ್ಳಿ ನೀರು ಶುದ್ಧೀಕರಣ ಟ್ಯಾಂಕ್‌ಗೆ ತುಂಬಿಸಿ ಅಲ್ಲಿಂದ ನೀರು ಪೂರೈಕೆ ಮಾಡಿದಾಗ ಮಾತ್ರ ಟ್ಯಾಂಕರ್‌ಗಳ ಹಾವಳಿ ತಪ್ಪುತ್ತದೆ ಎಂದರು.

ಎತ್ತಿನಹೊಳೆ ಯೋಜನೆಯೂ ನೇತ್ರಾವತಿ ಯೋಜನೆಯಲ್ಲಿ ಸೂಚಿಸಲಾಗಿರುವ ಮಾರ್ಗದ ಮೂಲಕವೇ ನೀರು ಪೂರೈಸಲಿದೆ. ಖಾಸಗಿ ಕಂಪನಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಚಿವರು ಸೇರಿದಂತೆ ಹಿರಿಯರ ಮಾರ್ಗ ದರ್ಶನದಂತೆ ಯೋಜನೆ ಜಾರಿಗೊಳಿಸಿ ಜಿಲ್ಲೆಯ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.

ಧೀಮಂತ ನಾಯಕ: ಶಿವಾಜಿ ಭಾವಚಿತ್ರವನ್ನು ಅನಾವರಣ ಮಾಡಿದ ಕೇಂದ್ರ ಸಚಿವ ಕೆ.ಎಚ್.ಮುನಿ ಯಪ್ಪ, ಹದಿನಾರನೇ ಶತಮಾನದಲ್ಲಿ ಧರ್ಮ ರಕ್ಷಣೆ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಛತ್ರಪತಿ ಶಿವಾಜಿ  ಎಂದು ಬಣ್ಣಿಸಿದರು.ಛತ್ರಪತಿ ಶಿವಾಜಿ ಮಹಾರಾಜರ ಭವನ ನಿರ್ಮಾಣಕ್ಕಾಗಿ ಕೇಂದ್ರ ಸಚಿವರ ನಿಧಿಯಿಂದ ಧನಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಶಿವಾಜಿ ಜೀವನ ಮತ್ತು ಹೋರಾಟದ ಕುರಿತು ನಿವೃತ್ತ ಮುಖ್ಯಶಿಕ್ಷಕ ಹನುಮಪ್ಪ ಮಾತನಾಡಿದರು.
ಶಾಸಕ ಎಂ.ನಾರಾಯಣಸ್ವಾಮಿ, ಮರಾಠ ಸಮಾಜದ ರಾಜ್ಯದ ಅಧ್ಯಕ್ಷ ಶ್ರೀಧರ್‌ರಾವ್ ಶಿಂದೆ ಮಾತನಾಡಿದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಡಿ.ವಿ.ಹರೀಶ್, ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರಚೋಳನ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ  ಎನ್.ರಮಾದೇವಿ, ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್‌ಪೆದ್ದಪ್ಪಯ್ಯ ಭಾಗವಹಿಸಿದ್ದರು. 

ತಹಶೀಲ್ದಾರ್ ಮುನಿವೀರಪ್ಪ ಸ್ವಾಗತಿಸಿದರು. ವೆಂಕಟಾಚಲಪತಿ ವಂದಿಸಿದರು.  ನಾರಾಯಣಸ್ವಾಮಿ ನಿರೂಪಿಸಿದರು.  ಕಲಾವಿದರಾದ ರಾಜಪ್ಪ, ಮುನಿರೆಡ್ಡಿ ಗೀತೆಗಳನ್ನು ಹಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.