ADVERTISEMENT

ಡಿಡಿಪಿಯು ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 5:45 IST
Last Updated 26 ಫೆಬ್ರುವರಿ 2011, 5:45 IST

ಕೋಲಾರ: ಪ್ರಥಮ ಪಿಯುಸಿ ಜಿಲ್ಲಾಮಟ್ಟದ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಗುಣಮಟ್ಟ ಕಳಪೆಯಾಗಿವೆ. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ಪ್ರಶ್ನೆಪತ್ರಿಕೆಯನ್ನು ನೀಡಿಲ್ಲ ಎಂದು ಆರೋಪಿಸಿ ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಪದವಿಪೂರ್ವ ಮತ್ತು ವೃತ್ತಿಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು.
ಎರಡು ಹಾಳೆಯಲ್ಲಿ ನೀಡಬೇಕಾದ ಪ್ರಶ್ನೆಪತ್ರಿಕೆಯನ್ನು ಒಂದೆ ಹಾಳೆಯಲ್ಲಿ ನೀಡಿರುವುದರಿಂದ ಪ್ರಶ್ನೆಗಳನ್ನು ಇಕ್ಕಟ್ಟಿನಲ್ಲಿ ಇರುಕಿಸಲಾಗಿದೆ. ಪ್ರಶ್ನೆಗಳ ಓದುವಿಕೆಗೆ ಅದರಿಂದ ಭಂಗವಾಗಿದೆ.
ಎರಡೂ ಭಾಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಎಲ್ಲರಿಗೂ ನೀಡುವ ಸಂಪ್ರದಾಯಕ್ಕೆ ಕೊನೆ ಹಾಡಲಾಗಿದೆ. ಅದಕ್ಕೆ ಕಾರಣವೇನು? ಪ್ರಶ್ನೆಪತ್ರಿಕೆಯನ್ನು ಸಮರ್ಪಕವಾಗಿ ಮುದ್ರಿಸಲು ಇಲಾಖೆಯು ಹಣ ನೀಡಿಲ್ಲವೆ? ಎಂದು ವಿದ್ಯಾರ್ಥಿ ಮುಖಂಡ ಬಿ.ಸುರೇಶ್‌ಗೌಡ ಅಧಿಕಾರಿಯನ್ನು ಪ್ರಶ್ನಿಸಿದರು.ಮೊದಲಿಗೆ ಸ್ಪಷ್ಟನೆ ನೀಡಲು ನಿರಾಕರಿಸಿದ ಅಧಿಕಾರಿ ವಿಜಯವರ್ಮ, ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಮತ್ತು ಉಪನ್ಯಾಸಕರ ಸಂಘದ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸಿದರು.

ನಂತರ ಮಾತನಾಡಿ, ಪ್ರಶ್ನೆಪತ್ರಿಕೆ ಮುದ್ರಣದಲ್ಲಿ ಲೋಪವಾಗಿರುವುದು ನಿಜ. ಮುಂದಿನ ದಿನಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಮರ್ಪಕವಾಗಿ ಮುದ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಶ್ರೀಧರ್, ಪುಟ್ಟರಾಜು, ನವೀನ್, ರವಿ, ಪ್ರಜ್ವಲ್, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ನಾಗಾನಂದ್, ಚಂದ್ರಪ್ಪ, ಜಿ.ಜೆ.ನಾಗರಾಜ್, ವೆಂಕಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.