ಗುಡಿಬಂಡೆ: `ತಾಯಿ ಇಲ್ಲದ ಮಗ, ಯಾರು ನೋಡಿಕೋಬೇಕು ಹೇಳು? ಅವನ ಅಪ್ಪ ಕೂಲಿಗೆ ಹೋಗದೆ ದಿನ ಕಳೆಯೋದು ಕಷ್ಟ. ಇವನನ್ನು ನೋಡಿಕೊಂಡು ಕೂತರೆ ಹೊಟ್ಟೆ ಕೇಳಬೇಕಲ್ಲ~ ಎಂದು ಪರಿಚಿತರು ನಿಟ್ಟುಸಿರಿಟ್ಟರೆ, `ಅಲ್ನೋಡು ಬೆತ್ತಲೆ ಕೂತಿದ್ದಾನೆ. ಅವನ ಮನೆಯವರಿಗಾದರೂ ಗೊತ್ತಾಗಲ್ವಾ?~ ಎಂದು ಅಪರಿಚಿತರು ಬಯ್ದುಕೊಳ್ಳುತ್ತಾರೆ.
ಈ ಎರಡೂ ಬಗೆ ಮಾತಿಗೂ ತನಗೂ ಸಂಬಂಧವೆ ಇಲ್ಲ ಎಂಬ ರೀತಿಯಲ್ಲಿ ಈತ ರಸ್ತೆಬದಿಯಲ್ಲಿ ಬೆತ್ತಲೆ ಕೂತಿರುತ್ತಾನೆ.
`ಈತ~ನ ಹೆಸರು ತಿಮ್ಮಪ್ಪ. ವಯಸ್ಸು 25. ಗುಡಿಬಂಡೆ ಸಮೀಪದ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೊಮ್ಮಗಾನಹಳ್ಳಿಯವನು. ತಿಮ್ಮಪ್ಪ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈತನ ತಾಯಿ ಬದುಕಿರುವವರೆಗೆ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಕೆಲ ವರ್ಷಗಳ ಹಿಂದೆ ಆಕೆ ತೀರಿಕೊಂಡರು. ಆ ನಂತರ ಮನೆಯಲ್ಲಿ ಉಳಿದಿದ್ದು ತಂದೆ- ಮಗ ಹಾಗೂ ಬಡತನ.
ಕೂಲಿ ಕೆಲಸಕ್ಕೆ ಹೋಗುವ ತಂದೆಗೆ ಮಗನ ಆರೈಕೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. `ತಿಮ್ಮಪ್ಪ ಯಾವಾಗೆಂದರೆ ಆಗ ಮೈಮೇಲಿನ ಬಟ್ಟೆಯೆಲ್ಲ ಕಳಚಿ ರಸ್ತೆ ಮಧ್ಯಕ್ಕೆ ಬಂದು ಬಿಡುತ್ತಾನೆ.
ಪೆರೆಸಂದ್ರ ಹಾಗೂ ಗುಡಿಬಂಡೆ ಮಧ್ಯೆ ಸಂಚರಿಸುವ ವಾಹನಗಳಿಗೆ ಈತ ಸಿಕ್ಕಿಕೊಂಡ ಉದಾಹರಣೆಯೂ ಇದೆ. ಸಣ್ಣ- ಪುಟ್ಟ ಗಾಯಗಳೂ ಆಗಿವೆ. ಕಷ್ಟಪಟ್ಟು ಬಟ್ಟೆ ಹಾಕಿದರೂ ಕೆಲವೇ ಕ್ಷಣಗಳಲ್ಲಿ ಕಳಚಿ ಹಾಕಿ ಮತ್ತೆ ರಸ್ತೆಗೆ ಬಂದುಬಿಡುತ್ತಾನೆ~ ಎಂದು ತಿಮ್ಮಪ್ಪನ ತಂದೆ ನಾಗಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಈತನ ಚಿಕಿತ್ಸೆಗಾಗಿ ಪೋಷಕರು ತಮ್ಮ ಆರ್ಥಿಕ ಚೈತನ್ಯಕ್ಕೆ ನಿಲುಕುವ ಎಲ್ಲ ವೈದ್ಯರ ಬಳಿ ಎಡತಾಕಿದ್ದಾರೆ. ಆದರೆ ಏನೂ ಸುಧಾರಣೆಯಾಗಿಲ್ಲ. `ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತೋರಿಸುವುದಕ್ಕೆ ಬಡತನದ ಬಂಡೆ ಎದೆ ಮೇಲೆ ಕೂತಿದೆ~ ಎಂದು ನಾಗಪ್ಪನವರು ಮಗನೆಡೆಗೆ ದೈನ್ಯದಿಂದ ನೋಡುತ್ತಾರೆ.
ತಿಮ್ಮಪ್ಪನಿಗೆ ತುರ್ತು ಮಾನಸಿಕ ಚಿಕಿತ್ಸೆ ಅಗತ್ಯವಿದೆ. ಅಂಗವಿಕಲ ಇಲಾಖೆ ಅಥವಾ ಸಹೃದಯಿಗಳ ಸಹಾಯಹಸ್ತ ದೊರೆತರೆ ತಿಮ್ಮಪ್ಪನ ಮನಸ್ಸಿಗೆ ಚಿಕಿತ್ಸೆ ದೊರಕಿಸಬಹುದು. ಸಂಪರ್ಕ ಸಂಖ್ಯೆ 8970859234.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.