ಬಂಗಾರಪೇಟೆ: ದೇಸಿ ಕಲೆ, ಸಂಸ್ಕೃತಿ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಆಶ್ವತ್ಥ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಗೌತಮ ಶೈಕ್ಷಣಿಕ ಮತ್ತು ಕವಿ ಕಾವ್ಯ ಸಾಂಸ್ಕೃತಿಕ ಕಲಾ ಸಂಘ ಉದ್ಘಾಟಿಸಿ ಮಾತನಾಡಿ, ಅಧುನಿಕ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ನಾಡು, ನುಡಿ ಸಂಸ್ಕೃತಿ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ. ಗ್ರಾಮೀಣ ಭಾಗದ ದೇಸಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ ಎಂದರು.
ಮಾಧ್ಯಮಗಳ ಪ್ರಭಾವಕ್ಕೆ ಸಿಲುಕಿರುವ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಜನಪದ, ಸೋಬಾನೆ ಪದ, ಗೀಗೀ ಪದಗಳಂಥ ದೇಸಿ ಕಲೆಗಳೂ ನಶಿಸಿಹೋಗುತ್ತಿವೆ ಎಂದು ವಿಷಾದಿಸಿದರು.
ಗೌತಮ ಶೈಕ್ಷಣಿಕ ಮತ್ತು ಕವಿಕಾವ್ಯ ಸಾಂಸ್ಕೃತಿ ಕಲಾ ಸಂಘದ ಅಧ್ಯಕ್ಷ ವಿ.ಲಕ್ಷ್ಮಯ್ಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ಶ್ರಮಿಸುವುದು ಸಂಘದ ಉದ್ದೇಶವಾಗಿದೆ ಎಂದರು.
ಕವಿ ಶರಣಪ್ಪ ಗಬ್ಬೂರು ತಂಡ, ಸಾಹಿತಿ ಜಿ.ಟಿ.ರಾಮಚಂದ್ರಪ್ಪ ತಂಡ ಹಾಗೂ ಶಿಕ್ಷಕ ಕೆ.ಜಿ.ಮಂಜುನಾಥ್ ತಂಡದವರು ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ವಕೀಲ ಚಲಪತಿ, ಶಿಕ್ಷಕ ಆರ್.ಮುನಿನಾರಾಯಣ, ಮುಖಂಡರಾದ ಸೈಯದ್ ಗುಲ್ಜಾರ್, ಕೆ.ಜಿ.ಮಂಜುನಾಥ್, ಚಂದ್ರಪ್ಪ, ಎಳೇಸಂದ್ರ ನಾಗರಾಜ್, ಟಿ.ಎಂ.ನಾಗರಾಜ್, ಪಾಪೇಗೌಡ, ಉಪೇಂದ್ರ, ಮುರಳಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.