ADVERTISEMENT

ಪ್ರಾಧಿಕಾರಕ್ಕೆ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 10:35 IST
Last Updated 21 ಸೆಪ್ಟೆಂಬರ್ 2011, 10:35 IST

ಕೆಜಿಎಫ್: ಬಂಗಾರಪೇಟೆ ತಾಲ್ಲೂಕಿನ 110 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರು ಮತ್ತು ಡಿ ದರ್ಜೆ ನೌಕರರೊಬ್ಬರನ್ನು ಹೊರತು ಪಡಿಸಿ ಖಾಯಂ ಸಿಬ್ಬಂದಿ ಇಲ್ಲದ ಕಾರಣ ಸಾರ್ವಜನಿಕ ಕೆಲಸಗಳ ವೇಗ ಕುಂಠಿತಗೊಂಡಿದೆ.

ಬರವಣಿಗೆ, ಪತ್ರ ವ್ಯವಹಾರಗಳನ್ನು ಖುದ್ದಾಗಿ ಆಯುಕ್ತರೇ ನಿರ್ವಹಿಸಬೇಕಾಗಿದೆ. ಕಚೇರಿಯ ಡ್ರಾಫ್ಟ್‌ಮೆನ್ ಆಗಿರುವ ಏಕೈಕ ಸಿಬ್ಬಂದಿ ಕಚೇರಿಯ ಒಳಗೆ ಮತ್ತು ಹೊರಗಿನ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ಬೇರೆ ಇಲಾಖೆಯಿಂದ ಬಂದ ಒಬ್ಬರು ಎಂಜಿನಿಯರ್, ಮೂವರು ಅರೆಕಾಲಿಕ ಸಿಬ್ಬಂದಿ ಹಾಗೂ ಹೊರಗುತ್ತಿಗೆಯಿಂದ ಬಂದ ಮೂವರು ಸಿಬ್ಬಂದಿಗಳು ಇದ್ದಾರೆ.

ಬಂಗಾರಪೇಟೆ ಪುರಸಭೆ ಮತ್ತು ರಾಬರ್ಟ್‌ಸನ್‌ಪೇಟೆ ನಗರಸಭೆ ವ್ಯಾಪ್ತಿ ಕೂಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬರುತ್ತದೆ. ಗ್ರಾಮ ಪಂಚಾಯಿತಿಗಳು, ಪುರಸಭೆ ಮತ್ತು ನಗರಸಭೆ ವಸತಿ ನಿರ್ಮಾಣಕ್ಕೆ ಮತ್ತು ವಸತಿ ವಿನ್ಯಾಸಕ್ಕೆ ಅನುಮತಿ ನೀಡುವ ಅಧಿಕಾರವಿಲ್ಲದ ಕಾರಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅನುಮತಿಗಾಗಿ ಬರುವುದು ಕಡ್ಡಾಯ.

ಅಕ್ರಮ ಕಟ್ಟಡಗಳು, ಅಕ್ರಮವಾಗಿ ನಿವೇಶನಗಳನ್ನು ರಚಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಭೂ ಮಾಫಿಯಾ ತಡೆಗಟ್ಟಲು ಸಿಬ್ಬಂದಿಯೇ ಇಲ್ಲವಾಗಿದೆ. ಯಾವುದಾದರೂ ನಿರ್ದಿಷ್ಟ ದೂರು ಬಂದರೆ ಮಾತ್ರ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಪರಿಸ್ಥಿತಿಯಲ್ಲಿ ಸಿಬ್ಬಂದಿ ಇದ್ದಾರೆ.

ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯಕ್ಕೆ ಸಹ ಪುರಸಭೆ ಮತ್ತು ಗ್ರಾಮ ಪಂಚಾಯಿತಿ ನೌಕರರನ್ನು ಪ್ರಾಧಿಕಾರ ಆಶ್ರಯಿಸಬೇಕಾಗಿದೆ. ಸರ್ಕಾರ ಅಗತ್ಯ ಸಿಬ್ಬಂದಿಯನ್ನು ಪ್ರಾಧಿಕಾರಕ್ಕೆ ನೇಮಕ ಮಾಡಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT