ADVERTISEMENT

ಬಿತ್ತನೆ ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 8:15 IST
Last Updated 3 ಜೂನ್ 2011, 8:15 IST

ಮುಳಬಾಗಲು: ಸರ್ಕಾರದಿಂದ ವಿತರಿಸುವ ಸಬ್ಸಿಡಿ ದರದ ಬಿತ್ತನೆ ಬೀಜ ಪಡೆದುಕೊಂಡು ಸಕಾಲಕ್ಕೆ ಬಿತ್ತನೆ ಮಾಡಬೇಕು ಎಂದು ಶಾಸಕ ಅಮರೇಶ್ ರೈತರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಬುಧವಾರ ಕೃಷಿ ಇಲಾಖೆ ಆಯೋಜಿಸಿದ್ದ `ರಿಯಾಯ್ತಿ ದರದಲ್ಲಿ ನೆಲಗಡಲೆ ಬಿತ್ತನೆ ಬೀಜ ವಿತರಣೆ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಿಯಾಯ್ತಿ ದರದಲ್ಲಿ ಭತ್ತ, ರಾಗಿ ಬಿತ್ತನೆ ಬೀಜ ಸೇರಿದಂತೆ ಅಗತ್ಯ ಕೃಷಿ ಸಲಕರಣೆ ವಿತರಿಸಲಾಗುವುದು ಎಂದರು.

ಕೃಷಿ ಅಧಿಕಾರಿಗಳು ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟದ ಅಂಗಡಿಗಳಿಗೆ ಹಠಾತ್ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಬೇಕು. ರೈತರಿಂದಲೂ ಅಗತ್ಯ ಮಾಹಿತಿ ಪಡೆಯಬೇಕು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಗ್ರಾ.ಪಂ ಕಾರ್ಯದರ್ಶಿ, ಬಿಲ್ ಕಲೆಕ್ಟರ್‌ಗಳ ನೆರವು ಪಡೆಯಬೇಕೆಂದು ಅವರು ಸೂಚಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನ 20 ಸಾವಿರ ಎಕರೆ ಪ್ರದೇಶದಲ್ಲಿ ನೆಲಗಡಲೆ ಬೆಳಯುವ ಗುರಿಯೊಂದಿಗೆ 800 ಕ್ವಿಂಟಾಲ್ ಬಿತ್ತನೆ ಬೀಜವನ್ನು ಸರ್ಕಾರ ಸರಬರಾಜು ಮಾಡಿದೆ. ಶೀಘ್ರದಲ್ಲಿಯೇ ಲಘು ಪೋಷಕಾಂಶಗಳಾದ ಜಿಂಕ್, ಸಲ್ಪೇಟ್, ಜಿಪ್ಸಮ್, ಬೋರಾಕ್ಸ್, ಪಿಎಸ್‌ಬಿಗಳನ್ನು ಶೇ.50ರ ರಿಯಾಯ್ತಿ ದರದಲ್ಲಿ ವಿತರಿಸಲಾಗುವುದು. 30 ಕೆ.ಜಿ ನೆಲಗಡಲೆ ಬಿತ್ತನೆ ಬೀಜಕ್ಕೆ ರೂ.1,140 ನಿಗದಿಪಡಿಸಲಾಗಿದೆ ಎಂದರು.

ತಾ.ಪಂ. ಸದಸ್ಯೆ ನಾಗರತ್ನಮ್ಮ. ಭೂ ಬ್ಯಾಂಕ್ ಮಾಜಿ ನಿರ್ದೇಶಕ ಬೇವಹಳ್ಳಿ ಮುನಿಯಪ್ಪ, ತಾ.ಪಂ ಮಾಜಿ ಅಧ್ಯಕ್ಷ ಎನ್.ವೆಂಕಟೇಶಗೌಡ, ಜಿ.ಪಂ ಮಾಜಿ ಸದಸ್ಯ ರಾಜಗೋಪಾಲ್, ಚಂದ್ರೇಗೌಡ, ನಾರಾಯಣರೆಡ್ಡಿ. ಕೆ.ವಿ.ಸುಬ್ರಮಣ್ಯಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.