ಕೆಜಿಎಫ್: ನಗರದ ರಾಬರ್ಟ್ಸನ್ಪೇಟೆ ಬಳಿ ಮಂಗಳವಾರ ಸಂಜೆ ಬೀಸಿದ ಭಾರಿ ಬಿರುಗಾಳಿಯಿಂದ ನಗರದ ಜನತೆ ಸೈನೆಡ್ ದೂಳಿನ ಸ್ನಾನ ಅನುಭವಿಸಿದರು.
ಸಂಜೆ 4.30ರಿಂದ ಸುಮಾರು ಅರ್ಧ ಗಂಟೆ ಕಾಲ ಬೀಸಿದ ಬಿರುಗಾಳಿಯಿಂದ ಊರಿಗಾಂ, ಕೆನಡೀಸ್ ಲೈನ್, ಅಶೋಕನಗರ, ಡಾ.ಅಂಬೇಡ್ಕರ್ ರಸ್ತೆ, ಎಂ.ಜಿ.ಮಾರುಕಟ್ಟೆ ಸಂಕೀರ್ಣ ಹಾಗೂ ರಾಬರ್ಟ್ಸನ್ಪೇಟೆ ಸಂಪೂರ್ಣವಾಗಿ ದೂಳುಮಯವಾಯಿತು.
ಬಿಜಿಎಂಎಲ್ನ ಸೈನೆಡ್ ಗುಡ್ಡದ ಮೇಲ್ಭಾಗದ ತೆಳುಮಣ್ಣು ಬಿರುಗಾಳಿಯೊಂದಿಗೆ ಮಿಶ್ರವಾಗಿ ಹರಡತೊಡಗಿದಾಗ ಇಡೀ ಪ್ರದೇಶದ ಜನತೆ ಸಂಕಟ ಪಡುವಂತಾಯಿತು.
ಬಸ್ ನಿಲ್ದಾಣದಲ್ಲಿದ್ದ ಸಾವಿರಾರು ಜನ ದೂಳಿನಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡಿದರು. ಪಾದಚಾರಿಗಳು ಹಾಗೂ ವಾಹನ ಚಾಲಕರು ದೂಳಿನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಮಂಗಳವಾರ ಬಹುತೇಕ ಅಂಗಡಿಗಳು ಮುಚ್ಚಿದ್ದ ಕಾರಣ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಯಿತು. ತೆರೆದಿದ್ದ ಅಂಗಡಿಗಳ ಮಾಲೀಕರು ಸಹ ಕೆಲ ಹೊತ್ತು ಅಂಗಡಿಗಳ ಬಾಗಿಲನ್ನು ಮುಚ್ಚಿ ಗಾಳಿ ನಿಲ್ಲುವುದನ್ನೇ ಕಾಯುತ್ತಿದ್ದರು.
ಸೈನೆಡ್ ಗುಡ್ಡದಿಂದ ನಗರದ ಜನತೆ ಕಷ್ಟ ಅನುಭವಿಸುವುದು ಹೊಸತೇನೂ ಅಲ್ಲದಿದ್ದರೂ; ಸಾಮಾನ್ಯವಾಗಿ ಆಷಾಢದಲ್ಲಿ ಏಳುತ್ತಿದ್ದ ದೂಳು ಈಗ ಅಕಾಲದಲ್ಲಿ ಎದ್ದಿದ್ದು ತಾಪತ್ರಯಕ್ಕೆ ಕಾರಣವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.