ADVERTISEMENT

ಬೀದಿ ನಾಟಕದ ಪರಿಣಾಮ ಹೆಚ್ಚಲಿ:ಡಿಸಿ

ಮಾಹಿತಿ ನೀಡದ ಬ್ಯಾಂಕ್ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 10:44 IST
Last Updated 23 ಮಾರ್ಚ್ 2014, 10:44 IST

ಕೋಲಾರ: ಲೋಕಸಭೆ ಕ್ಷೇತ್ರದಲ್ಲಿ ಶೇ 100ರಷ್ಟು ಮತದಾನವಾಗುವ ರೀತಿ­ಯಲ್ಲಿ ಮತದಾರರನ್ನು ಉತ್ತೇಜಿಸುವ ಸಲುವಾಗಿ  ಹೆಚ್ಚು ಜನ ಸೇರುವ ಸ್ಥಳ­ಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿ­ಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರವಿ ತಿಳಿಸಿದರು.

ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ  ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ಶೇ 60­ಕ್ಕಿಂತಲೂ ಹೆಚ್ಚು ಮತದಾನವಾಗಿರುವ ಮತಗಟ್ಟೆಗಳಿರುವ ಗ್ರಾಮಗಳಲ್ಲಿ ಸ್ವೀಪ್‌ ಕಾರ್ಯಕ್ರಮ ಹಮ್ಮಿಕೊಳ್ಳ­ಲಾಗುತ್ತಿದೆ ಎಂದರು.

ಬೀದಿ ನಾಟಕಗಳು ಸಮುದಾಯದ ನಡುವೆ ನಡೆದರೂ ಜನರನ್ನು ಒಳಗೊಂಡ ಸಂವಹನಶೀಲ ನೆಲೆಯಲ್ಲಿ ಪ್ರತಿಕ್ರಿಯೆ ಮೂಡಿಸುವಲ್ಲಿ ನಿರೀಕ್ಷಿತ ಪರಿಣಾಮ  ಬೀರುತ್ತಿಲ್ಲ ಎಂಬ ಮಾಧ್ಯಮದವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ಜನರ ಗಮನ ಸೆಳೆಯುವ ಹಳೆಯ ಪದ್ಧತಿಯಾದ ಬೀದಿನಾಟಕಗಳು ಮೊದಲಿನ ತೀವ್ರತೆ ಉಳಿಸಿಕೊಂಡಿಲ್ಲ. ಜನರಲ್ಲೂ ಬೀದಿ­ನಾಟಕ­ಗಳಿಗೆ ಸ್ಪಂದಿಸುವ ಮನೋ­ಭಾವನೆ ಕಡಿಮೆಯಾಗಿದೆ ಎಂದರು.

ನಕಲಿ ಮದ್ಯ ತಡೆಗೆ ಕ್ರಮ: ಕಳೆದ ಚುನಾವಣೆಯಲ್ಲಿ ಕ್ಷೇತ್ರದ ವಿವಿಧೆಡೆ ನಕಲಿ ಮದ್ಯವನ್ನು ಸೇವನೆ ಮಾಡಿ ಸುಮಾರು 38 ಮಂದಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿದ್ದ ಬಹುತೇಕ ನಕಲಿ ಮದ್ಯ ತಯಾರಿಕೆ ಘಟಕಗಳನ್ನು ನಾಶಗೊಳಿಸಲಾಗಿದೆ. ಹೊರಗಿನ ರಾಜ್ಯದಿಂದ ಬರುವ ಮದ್ಯವನ್ನು ನಕಲಿ ಎನ್ನಲಾಗುವುದಿಲ್ಲ. ತೆರಿಗೆ ಪಾವತಿಸದ ಮದ್ಯ ಮತ್ತು ನಕಲಿ ಮದ್ಯವನ್ನು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬ್ಯಾಂಕ್‌ ವಿರುದ್ಧವೂ ಕ್ರಮ: ₨ 10 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆಯು­ವವರ ಕುರಿತು ಮಾಹಿತಿಗಳನ್ನು ನೀಡದಿ­ದ್ದರೆ ಬ್ಯಾಂಕ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶವಿದೆ. ಅಲ್ಲದೆ ಬ್ಯಾಂಕ್‌ಗಳಿಗೂ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

30ರಿಂದ ವೆಚ್ಚ ವೀಕ್ಷಣೆ: ನಾಮಪತ್ರ­ಗಳನ್ನು ವಾಪಸ್‌ ಪಡೆಯಲು ಕೊನೆ ದಿನವಾದ ಮಾ.29ರ ಬಳಿಕವಷ್ಟೇ ಅಭ್ಯರ್ಥಿಗಳ ವೆಚ್ಚದ ವಿವರಗಳನ್ನು ಪರಿಗಣಿಸಲಾಗವುದು. ಅಲ್ಲಿವರೆಗೂ ನಡೆಯುವ ಪ್ರಚಾರದ ಖರ್ಚುಗಳನ್ನು ಪಕ್ಷದ ಲೆಕ್ಕದಲ್ಲಿ ಪರಿಗಣಿಸಲಾಗುವುದು ಎಂದು ವೆಚ್ಚ ವೀಕ್ಷಕರಾದ ಮುರುಗ­ಯ್ಯನ್, ಎಸ್. ಸುದರ್ಶನ್ ಸಾಗರ ಸುದ್ದಿಗಾರರಿಗೆ ತಿಳಿಸಿದರು.

ವೆಚ್ಚಗಳ ಬಗ್ಗೆ ತಾವು ಮಾಧ್ಯಮ­ದೊಂದಿಗೆ ಮಾತನಾಡುವಂತಿಲ್ಲ. ಆದರೆ ಮಾಧ್ಯಮದವರು ನೀಡುವ ಸಲಹೆ­ಗಳನ್ನು ಪಡೆಯುತ್ತೇವೆ. ಎಲ್ಲವನ್ನೂ ವೀಕ್ಷಿಸಿ ಆಯೋಗಕ್ಕೆ ವರದಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.