ADVERTISEMENT

ಬೆಮಲ್: ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:53 IST
Last Updated 1 ಜೂನ್ 2013, 10:53 IST

ಕೆಜಿಎಫ್: ಬೆಮಲ್‌ನ ಅಧಿಕೃತ ಕಾರ್ಮಿಕ ಸಂಘಟನೆಯಾದ ಬಿಇಎಂಇಎ (ಭಾರತ್ ಅರ್ತ್ ಮೂವರ್ಸ್‌ ಎಂಪ್ಲಾಯಿಸ್ ಅಸೋಸಿಯೇಷನ್)ಗೆ ತಕ್ಷಣ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಡಬ್ಲ್ಯುಯುಎಫ್ (ವರ್ಕರ್ಸ್‌ ಯೂನಿಟಿ ಫೋಂ) ಕಾರ್ಯಕರ್ತರು ಶುಕ್ರವಾರ ಬೆಮಲ್ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಭೋಜನ ಸಮಯದಲ್ಲಿ ಹೊರಬಂದ ಕಾರ್ಮಿಕರು ಬಿಇಎಂಇಎ ಅಧಿಕಾರ ಚುಕ್ಕಾಣಿ ಹಿಡಿದಿರುವ ಜೆಎಸಿ ವಿರುದ್ಧ ಘೋಷಣೆಗಳನ್ನು ಕೂಗಿ, ಮೆರವಣಿಗೆ ನಡೆಸಿದರು. ನಂತರ ಬಿಇಎಂಇಎ ಕಚೇರಿಗೆ ಬಂದು ಜೆಎಸಿ (ಜಾಯಿಂಟ್ ಆಕ್ಷನ್ ಕಮಿಟಿ) ಪದಾಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕಾರ್ಮಿಕ ಮುಖಂಡ ಆಂಜನೇಯರೆಡ್ಡಿ ಮಾತನಾಡಿ, ಈಗಿರುವ ಬೆಮಲ್ ಕಾರ್ಮಿಕ ಸಂಘಟನೆ ಅಧಿಕಾರಾವಧಿ ಕಳೆದ ವರ್ಷ ಅಕ್ಟೋಬರ್ 12ಕ್ಕೆ ಮುಗಿದಿದೆ. ಉತ್ಪಾದನಾ ಅವಧಿ ಎಂಬ ಕಾರಣದಿಂದಾಗಿ ಆರು ತಿಂಗಳ ಕಾಲ ಚುನಾವಣೆ ಮುಂದೂಡುವ ಸಲಹೆಗೆ ಒಪ್ಪಲಾಗಿತ್ತು. ಆದರೆ ಈಗ ಯಾವುದೇ ಕಾರಣವಿಲ್ಲದೆ ಚುನಾವಣೆ ಮುಂದಕ್ಕೆ ಹಾಕುವ ಹುನ್ನಾರವನ್ನು ಆಡಳಿತಾರೂಢ ಜೆಎಸಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಈಗ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಚೈನಾ ಅಥವಾ ರಷ್ಯಾ ಮಾದರಿಯಾಗಿದೆ. ಭಾರತದ ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ. ಆದ್ದರಿಂದ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಮುಖಂಡರಾದ ಜಯಶೀಲನ್, ರಾಜೇಂದ್ರನ್, ಗಣೇಶ್‌ಕುಮಾರ್, ಶಂಕರ್‌ರೆಡ್ಡಿ, ಕುಲಕರ್ಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.