ADVERTISEMENT

ಭ್ರಷ್ಟರಿಗೆ ಟಿಕೆಟ್‌ ನೀಡಿದ ಪ್ರಧಾನಿ ಮೋದಿ

ರೋಡ್‌ ಷೋನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:32 IST
Last Updated 8 ಮೇ 2018, 13:32 IST

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಮತ್ತಷ್ಟು ಭ್ರಷ್ಟಾಚಾರ ಹೆಚ್ಚಿಸಲು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟರಿಗೆ ಟಿಕೆಟ್‌ ಕೊಟ್ಟಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.

ಜಿಲ್ಲೆಯ ಮಾಲೂರಿನಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡರ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ‘ಮೋದಿ ಭ್ರಷ್ಟಾಚಾರ ಬೆಂಬಲಿಸುವ ಉದ್ದೇಶಕ್ಕಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ ಅವರಿಗೆ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಬಿಜೆಪಿ ಆಡಳಿತಾ ವಧಿಯಲ್ಲಿ ಮುಖ್ಯಮಂತ್ರಿ ಯಾಗಿದ್ದ ಬಿ.ಎಸ್.ಯಡಿಯೂರಪ್ಪ, ರೆಡ್ಡಿ ಸಹೋದರರು ಸೇರಿದಂತೆ ಹಲವು ಸಚಿವರು ಜೈಲಿಗೆ ಹೋಗಿ ಬಂದಿದ್ದಾರೆ. ಅವರೆಲ್ಲಾ ಎಷ್ಟು ದುಡ್ಡು ಲೂಟಿ ಮಾಡಿದ್ದಾರೆ ಎಂಬ ಬಗ್ಗೆ ಮೋದಿ ತುಟಿ ಬಿಚ್ಚುವುದಿಲ್ಲ. ಈ ಭ್ರಷ್ಟರು ದೇಶವನ್ನು ಹೇಗೆ ಉದ್ಧಾರ ಮಾಡುತ್ತಾರೆ?’ ಎಂದು ಪ್ರಶ್ನಿಸಿದರು.

ADVERTISEMENT

‘ಬಸವಣ್ಣನ ಪ್ರತಿಮೆ ಮುಂದೆ ಕೈಜೋಡಿಸುವ ಮೋದಿಯವರು ನುಡಿದಂತೆ ನಡೆದಿಲ್ಲ, ನಾಲ್ಕೂವರೆ ವರ್ಷದಲ್ಲಿ ಅವರು ಒಂದೂ ಒಳ್ಳೆಯ ಕೆಲಸ ಮಾಡಿಲ್ಲ. ಬಡ ರೈತರ ಸಾಲ ಮನ್ನಾ ಮಾಡುವುದು ಬಿಟ್ಟು, ಬ್ಯಾಂಕ್‌ ಹಣ ಲೂಟಿ ಮಾಡಿರುವ- ನೀರವ್ ಮೋದಿಗೆ ಸಹಾಯ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಬೆಲೆ ಕಡಿಮೆ ಮಾಡಲಿ: ‘ಜಾಗತಿಕವಾಗಿ ಅಡುಗೆ ಅನಿಲ ಹಾಗೂ ತೈಲೋತ್ಪನ್ನಗಳ ಬೆಲೆ ಕಡಿಮೆಯಾಗಿದೆ. ಆದರೆ, ದೇಶದಲ್ಲಿ ಬೆಲೆ ಗಗನಕ್ಕೇರಿದೆ. ಇದಕ್ಕೆಲ್ಲಾ ಕೇಂದ್ರದ ಜನ ವಿರೋಧಿ ನೀತಿ ಕಾರಣ. ಮೋದಿ ಅವರಿಗೆ ಜನಪರ ಕಾಳಜಿ ಇದ್ದರೆ ಬೆಲೆ ಕಡಿಮೆ ಮಾಡಲಿ’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಮೋದಿ ನಾಲ್ಕು ವರ್ಷಗಳಿಂದ ಸುಳ್ಳು ಭರವಸೆ ಕೊಡುತ್ತಾ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದರೂ ರಕ್ಷಣೆ ನೀಡದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

ಧೈರ್ಯವಿಲ್ಲ: ‘ಮೋದಿ ಸಂವಿಧಾನದ ವಿರುದ್ಧ ಮಾತನಾಡಿದ ತಮ್ಮ ಸಂಪುಟದ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ಅವರ ಪರವಾಗಿ ಕ್ಷಮೆ ಕೇಳುತ್ತಾರೆ. ಅವರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿಲ್ಲ. ಸಂವಿಧಾನ ಬದಲಾಯಿಸಲು ಮುಂದಾ ಗಿರುವ ಬಿಜೆಪಿಯ ಪ್ರಯತ್ನಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ುಗಿಬಿದ್ದ ಕಾರ್ಯಕರ್ತರು: ಹೆಲಿಕಾಪ್ಟರ್ ಮೂಲಕ ಮಾಲೂರಿಗೆ ಆಗಮಿಸಿದ ರಾಹುಲ್‌ ಗಾಂಧಿ ಪಟ್ಟಣದ ರೈಲು ನಿಲ್ದಾಣದ ಬಳಿಯಿಂದ ಕೋಲಾರ ರಸ್ತೆ ವೃತ್ತವರೆಗೆ ರೋಡ್ ಷೋ ನಡೆಸಿದರು. ರಸ್ತೆ ಉದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನ ರಾಹುಲ್‌ ಗಾಂಧಿ ಬೆನ್ನು ಬಿದ್ದರು.

**
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಬಿಜೆಪಿಯ ಆರ್‌ಎಸ್‌ಎಸ್‌ ವಿಚಾರಧಾರೆಯು ದೇಶವನ್ನು ಛಿದ್ರಗೊಳಿಸುತ್ತದೆ. ಆದರೆ, ಕಾಂಗ್ರೆಸ್‌ ವಿಚಾರಧಾರೆಯು ಜನರನ್ನು ಒಗ್ಗೂಡಿಸುತ್ತದೆ
– ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.