
ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬೆಳೆದಿರುವ ಮಾವಿನ ಕಾಯಿಗೆ ಅಂಟು ನೊಣದ ಹಾವಳಿ ಹೆಚ್ಚಿದ್ದು, ಕಾಯಿ ನೊಣಗಳು ಸ್ರವಿಸುವ ಅಂಟಿನಿಂದ ಕಳೆಗುಂದುತ್ತಿದೆ. ಇದು ಈಗಾಗಲೆ ಬೆಲೆ ಕುಸಿತದಿಂದ ಬೇಸತ್ತಿರುವ ಬೆಳೆಗಾರರಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ಚಿಕ್ಕ ಗಾತ್ರದ ಮಿಡತೆ ಆಕಾರದ ಕೀಟಗಳು ಎಲೆಗಳ ಮೇಲೆ ನೆಲೆಸಿ, ಕಾಯಿಯ ಮೇಲೆ ಅಂಟು ಸುರಿಸುತ್ತಿವೆ. ಇದು ತುಂಬಾ ದಟ್ಟವಾಗಿದ್ದು, ಕಾಯಿ ಕೀಳಲೂ ಅಸಹ್ಯಪಡುವಂತಾಗಿದೆ.
ಕಾಯಿ ಕಿತ್ತು ಕೆಳಗೆ ಹಾಕಿದರೆ ಮಣ್ಣು, ಕಸಕಡ್ಡಿ ಕಾಯಿಗೆ ಅಂಟಿಕೊಂಡು ಕಸದಂತೆ ಕಾಣುತ್ತದೆ. ಇಂಥ ಕಾಯಿಯನ್ನು ಮಾರುಕಟ್ಟೆಗೆ ಕೊಂಡೊಯ್ದರೆ, ವ್ಯಾಪಾರಿಗಳು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಕಾಯಿ ಬೆಲೆಯಲ್ಲಿ ತೀರಾ ಇಳಿತ ಉಂಟಾಗಿದೆ.
ಸಾಲದ್ದಕ್ಕೆ ಅಂಟು ನೊಣದ ಹಾವಳಿ ಬೇರೆ. ಇದರಿಂದ ಮಾವು ಬೆಳೆಗಾರರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಈ ಹಿಂದೆ ಈ ಸಮಸ್ಯೆ ಹೂವಿನ ಹಂತದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ ವರ್ಷದಿಂದ ಈಚೆಗೆ ಮಾವು ಕಟಾವು ಕಾಲಕ್ಕೆ ಸರಿಯಾಗಿ ಈ ಅಂಟು ಕೀಟಗಳ ಬಾಧೆ ಹೆಚ್ಚಿದೆ.
ಈಗ ಮಾವು ಬೆಳೆಗಾರರು ಮಾವಿನ ಕಾಯಿ ಇಳಿಸುವುದನ್ನು ಬಿಟ್ಟು ಅಂಟು ನೊಣಗಳ ನಿಯಂತ್ರಣಕ್ಕೆ ದುಬಾರಿ ಬೆಲೆಯ ಔಷಧಿ ಸಿಂಪಡಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಮೋಡ ಮುಸುಕಿದ ವಾತಾವರಣ ಹಾಗೂ ಆಗೊಮ್ಮೆ ಈಗೊಮ್ಮೆ ಹನಿಯುವ ತುಂತುರು ಮಳೆ ಔಷಧಿ ಸಿಂಪಡನೆಗೆ ಅಡ್ಡಿ ಉಂಟುಮಾಡಿದೆ. ಈ ಪರಿಸ್ಥಿತಿಯಲ್ಲಿ ರೈತರು ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಜ್ಯೂಸ್ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ ತೋತಾಪುರಿ ಜಾತಿಯ ಮಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೊಯಿಲಿಗೆ ಬಂದಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆಯುವ ನೀಲಂ ಜಾತಿಯ ಮಾವು ಕೊಯಿಲಿಗೆ ಬರಬೇಕಾದರೆ ಇನ್ನೂ ಕನಿಷ್ಟ 20 ದಿನ ಬೇಕು. ಈ ಹಂತದಲ್ಲಿ ಸಮಸ್ಯೆ ತಲೆದೋರಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದು ಸಾಲದೆಂಬಂತೆ ತೋಟಗಳಲ್ಲಿ ಕಪ್ಪು ಚುಕ್ಕೆ ರೋಗ ಹೆಚ್ಚಿದೆ. ಹೂಜಿ ನೊಣದ ಹಾವಳಿಯೂ ಹೆಚ್ಚಾಗಿದೆ. ಒಟ್ಟಾರೆ ಮಾವು ಬೆಳೆಗಾರರು ಬೇರೆ ಬೇರೆ ಸಮಸ್ಯೆಗಳ ಸುಳಿಗೆ ಸಿಕ್ಕಿ ನಲಗುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.