ADVERTISEMENT

ಮಾವಿಗೆ ಬೆಂಬಲ ಬೆಲೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 6:50 IST
Last Updated 18 ಜೂನ್ 2011, 6:50 IST

ಶ್ರೀನಿವಾಸಪುರ: ಮಾವಿಗೆ ಬೆಲೆ ಕುಸಿತ ಉಂಟಾಗಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸರ್ಕಾರ ಬೆಂಬಲ ಬೆಲೆ ನೀಡಬೇಕು. ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಇಲ್ಲಿ ಮಾವು ಸಂಸ್ಕೃರಣ ಘಟಕವನ್ನು ಸ್ಥಾಪಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆಗ್ರಹಿಸಿದರು.

ಪಟ್ಟಣದ ಹೊರ ವಲಯದಲ್ಲಿನ ಭೈರವೇಶ್ವರ ವಿದ್ಯಾನಿಕೇತನದ ಸಭಾಂಗಣದಲ್ಲಿ ಬೆಂಗಳೂರಿನ ಜಿಕೆವಿಕೆ, ಹಣ್ಣು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ಮಾವು ನಿರ್ವಹಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಎಪಿಎಂಸಿ ಮಾರುಕಟ್ಟೆಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಲಾಗುವುದು. ಮಾವಿನ ಸುಗ್ಗಿ ಸಂದರ್ಭದಲ್ಲಿ ಮಾರುಕಟ್ಟೆಯ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ಮಾಡಿದರು.

ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣ ಘಟಕವನ್ನು ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಖಾಸಗಿಯವರು ಮುಂದೆ ಬಂದು ಮಾವು ಸಂಸ್ಕೃರಣ ಘಟಕ ಸ್ಥಾಪಿಸಿದಲ್ಲಿ ಅವರಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಕೆ.ನಾರಾಯಣಗೌಡ ಮಾತನಾಡಿ, ಮಾವು ಬೆಳೆ ಗಾರರು ಮಾವನ್ನು ವೈಜ್ಞಾನಿಕ ವಿಧಾನದಲ್ಲಿ ಕೊಯ್ಲು ಮಾಡಬೇಕು. ಅಂತಹ ಮಾವಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುತ್ತದೆ.  ಬೆಳೆಗಾರರು  ಮಧ್ಯವರ್ತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಸೂಕ್ತ ಮಾರುಕಟ್ಟೆ ಜ್ಞಾನ ಇದ್ದಲ್ಲಿ ಶೋಷಣೆಯಿಂದ ಮುಕ್ತವಾಗಬಹುದು ಎಂದು ಹೇಳಿದರು.

ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ, ಕೃಷಿ ವಿಜ್ಞಾನಿ ಡಾ. ಸುಧಾಕರ್, ಪ್ರಾಧ್ಯಾಪಕರಾದ ಡಾ. ಶ್ರೀರಾಮ್, ಡಾ. ಪಳನಿಮುತ್ತು, ಡಾ. ನಾರಾ ಯಣಸ್ವಾಮಿ, ಡಾ. ಗೀತಾ, ತಾಲ್ಲೂಕು ಮಾವು ಬೆಳೆ ಗಾರರ ಸಂಘದ ಅಧ್ಯಕ್ಷ ಸದಾಶಿವರೆಡ್ಡಿ  ಉಪಸ್ಥಿತರಿದ್ದರು. ಚಿನ್ನಪ್ಪರೆಡ್ಡಿ ಸ್ವಾಗತಿಸಿದರು. ಶ್ರೀನಿವಾಸಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.