ADVERTISEMENT

ಮೀನಾ ಮೇಳ ಸಮಾರೋಪ: ಹೆಣ್ಣಿನ ಶೋಷಣೆ ವಿರುದ್ಧ ದನಿ ಎತ್ತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:14 IST
Last Updated 6 ಏಪ್ರಿಲ್ 2013, 9:14 IST

ಕೋಲಾರ: ಸಮಾಜದಲ್ಲಿ ಹೆಣ್ಣಿಗಾಗುವ ಶೋಷಣೆ ತಡೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರೌಢಹಂತಕ್ಕೆ ಬಂದಿರುವ ಬಾಲಕಿಯರು ಹೆಣ್ಣಿನ ಮೇಲಿನ ಶೋಷಣೆ ವಿರುದ್ಧ ದನಿ ಎತ್ತಬೇಕಿದೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ವಿ.ಪದ್ಮನಾಭ್ ಅಭಿಪ್ರಾಯಪಟ್ಟರು.

ನಗರದ ಕಠಾರಿಪಾಳ್ಯದ ಬಿಆರ್‌ಸಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮೀನಾಮೇಳದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವ ಬ್ಲಾಕ್‌ಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರ ಮೀನಾ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಅವರಿಗಾಗಿ ವೃತ್ತಿ ಶಿಕ್ಷಣ, ಕ್ಷೇತ್ರ ಭೇಟಿ, ಹೆಣ್ಣು ಮಕ್ಕಳ ಸಬಲೀಕರಣದ ಜಾಗೃತಿ ಶಿಬಿರ, ಮೀನಾಮೇಳ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದರು.

ಸರ್ವಶಿಕ್ಷಣ ಅಭಿಯಾನದ ಅನುದಾನವನ್ನು ಈ ಕಾರ್ಯಕ್ರಮಗಳಿಗೆ ನೀಡಿದರೆ ಮಾತ್ರ ಉದ್ದೇಶ ಸಮರ್ಪಕವಾಗಿ ಈಡೇರುತ್ತದೆ ಎಂದರು.
ಬಾಲ್ಯ ವಿವಾಹ, ವರದಕ್ಷಿಣೆ, ಗೃಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿಕೆ, ಶಿಕ್ಷಣದಿಂದ ವಂಚಿತರಾಗುವಿಕೆ, ಶಾಲೆಯಿಂದ ಹೊರಗುಳಿಯುವಿಕೆಯಂಥ ಅನಿಷ್ಠಗಳ ಕುರಿತು ಜಾಗೃತಿ ಮೂಡಿಸಬೇಕಿದೆ. ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಅರಿವು ಕಾರ್ಯಕ್ರಮಗಳನ್ನು ನಾಟಕ, ಪ್ರಬಂಧ ಸ್ಪರ್ಧೆ, ಭಾಷಣಗಳ ಮೂಲಕ ಅನುಷ್ಠಾನಗೊಳಿಸಬೇಕು ಎಂದರು. ನಾಟಕ ಸ್ಪರ್ಧೆಯಲ್ಲಿ ಬಂಗಾರಪೇಟೆ ಪ್ರಥಮ, ಮುಳಬಾಗಲು ದ್ವಿತೀಯ, ಕೆಜಿಎಫ್ ತೃತೀಯ ಸ್ಥಾನ ಪಡೆಯಿತು.

ಅಧಿಕಾರಿಗಳಾದ ಸಿದ್ಧಗಂಗಯ್ಯ, ಭಾಗ್ಯಲಕ್ಷ್ಮೀ, ಆರ್.ಶ್ರೀನಿವಾಸನ್, ಗೋಪಿನಾಥ್, ಮುನಿರಾಜು, ಮುನಿಸ್ವಾಮಿಗೌಡ, ವೆಂಕಟಾಚಲಮೂರ್ತಿ, ಹನುಮಾನ್‌ಸಿಂಗ್, ಭಾನುಮತಿ, ಉಮಾ, ಸುಜಾತಾ, ಜಯಸುಧಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.