ADVERTISEMENT

ಮುನಿಯಪ್ಪ ನಾಮಪತ್ರ ಸಲ್ಲಿಕೆ

*ಚುರುಕುಗೊಂಡ ಚುನಾವಣಾ ಕಣ * ಬೆಂಬಿಡದ ರಾಹುಕಾಲದ ನೆರಳು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 6:06 IST
Last Updated 20 ಮಾರ್ಚ್ 2014, 6:06 IST
ಕೋಲಾರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಬರುವ ದಾರಿಯಲ್ಲಿ ಕೆ.ಎಚ್.ಮುನಿಯಪ್ಪ, ಸಚಿವ ಆರ್‌.ರೋಷನ್‌ ಬೇಗ್ ಅವರಿಗೆ ಕೈಮುಗಿದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್, ಶಾಸಕ ಕೆ.ಆರ್‌.ರಮೇಶಕುಮಾರ್‌ ಇದ್ದಾರೆ.
ಕೋಲಾರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಬರುವ ದಾರಿಯಲ್ಲಿ ಕೆ.ಎಚ್.ಮುನಿಯಪ್ಪ, ಸಚಿವ ಆರ್‌.ರೋಷನ್‌ ಬೇಗ್ ಅವರಿಗೆ ಕೈಮುಗಿದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್, ಶಾಸಕ ಕೆ.ಆರ್‌.ರಮೇಶಕುಮಾರ್‌ ಇದ್ದಾರೆ.   

ಕೋಲಾರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ.ಎಚ್‌.­ಮುನಿಯಪ್ಪ ನಗರದಲ್ಲಿ ಬುಧವಾರ ಚುನಾವಣಾಧಿಕಾರಿ ಡಿ.ಕೆ.ರವಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ 11.30ರ ವೇಳೆಗೆ ಚುನಾ­ವಣಾ­ಧಿಕಾರಿ ಕಚೇರಿಗೆ ಬಂದ ಮುನಿ­ಯಪ್ಪ ಎರಡು ನಾಮಪತ್ರಗಳನ್ನು ಸಲ್ಲಿಸಿ­ದರು. ನಾಮಪತ್ರಕ್ಕೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ಸರಿಯಾಗಿ ಸಜ್ಜು­ಗೊಳಿಸಿಕೊಳ್ಳದ ಪರಿಣಾಮವಾಗಿ ಸುಮಾರು 10 ನಿಮಿಷ ಕಾಲ ತಡ­ವಾಯಿತು. ಮಧ್ಯಾಹ್ನ 12 ಗಂಟೆಯಿಂದ ರಾಹುಕಾಲ ಆರಂಭವಾಗಲಿದ್ದ ಹಿನ್ನೆಲೆಯಲ್ಲಿ ಅವರು 11.50ರ ವೇಳೆಗೆ ಮೊದಲನೇ ನಾಮಪತ್ರವನ್ನು ಸಲ್ಲಿಸಿ­ದರು. ಕೊಂಚ ಉದ್ವಿಗ್ನರಾದಂತೆ ಕಂಡು ಬಂದ ಅವರು, ಎರಡನೇ ನಾಮಪತ್ರ­ವನ್ನು ಸಲ್ಲಿಸುವ ಹೊತ್ತಿಗೆ ಮಧ್ಯಾಹ್ನ 12.15 ಆಗಿತ್ತು.

ಮುನಿಯಪ್ಪ ಅವರೊಂದಿಗೆ ಇದ್ದ ವಕೀಲ ವಾಸುದೇವರಾವ್‌ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್‌ ಎರಡೂ ನಾಮಪತ್ರಗಳಿಗೆ ಅಗತ್ಯವಿರುವ ಪ್ರಮಾ­ಣ­ಪತ್ರಗಳ ಜೋಡಣೆಯಲ್ಲಿ ತೊಡಗಿಸಿ­ಕೊಂಡಿದ್ದರು. ನಂತರ ಬಂದ ಎಚ್‌.ವಿ.­ಕುಮಾರ್‌ ಮುನಿಯಪ್ಪ ಭಾವಚಿತ್ರ­ಗಳನ್ನು ನೀಡಿದರು. ನಂತರ ಮುನಿಯಪ್ಪ ಅಗತ್ಯವಿರುವೆಡೆ ಸಹಿ­ಗಳನ್ನು ಮಾಡಿದ ಬಳಿಕ ನಾಮ­ಪತ್ರಗಳನ್ನು ಸಲ್ಲಿಸಿದರು. ಅವರೊಡನೆ ಪತ್ನಿ ನಾಗರತ್ನಮ್ಮ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌ ಇದ್ದರು.

ನೂಕುನುಗ್ಗಲು: ನಾಮಪತ್ರ ಸಲ್ಲಿ­ಸುವ ಸಂದರ್ಭದಲ್ಲಿ ಅಭ್ಯರ್ಥಿ­ಯೊಡನೆ ಕೇವಲ ನಾಲ್ಕು ಮಂದಿ ಮಾತ್ರ ಹಾಜರಿರಬೇಕು ಎಂಬ ಸೂಚನೆ ಇದ್ದರೂ, ಮುನಿಯಪ್ಪ ಅವರೊಡನೆ ಬಂದ ಶಾಸಕ ಕೆ.ಎಂ.ನಾರಾಯಣ­ಸ್ವಾಮಿ, ನಸೀರ್‌ ಅಹ್ಮದ್‌ ಅವರೊಡನೆ ಹಲವು ಮುಖಂಡರು ಕೂಡ ಜಿಲ್ಲಾಧಿ­ಕಾರಿ ಕಚೇರಿಯೊಳಕ್ಕೆ ನುಗ್ಗಿದರು. ಕೊಂಚ ಕ್ಷಣ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಅನವಶ್ಯಕವಾದ ಎಲ್ಲರನ್ನೂ ಆಚೆ ಕಳಿಸಲು ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಂಟಾದ ಗಲಿಬಿಲಿ ಪರಿಣಾಮ ನಸೀರ್ ಅಹ್ಮದ್‌, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ಕೂಡ ಆಚೆಗೆ ತೆರಳಿದರು. ಕೂಡಲೇ ನಸೀರ್ ಅಹ್ಮದ್‌ ಅವರನ್ನು ಕರೆತರುವಂತೆ ಮುನಿಯಪ್ಪ ಕೆ.ಎಂ.ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು. ನಸೀರ್‌ ಅಹ್ಮದ್‌ ಅವರನ್ನು ಒಳಗೆ ಬರಮಾಡಿಕೊಂಡ ನಾರಾಯಣಸ್ವಾಮಿ ನಿರ್ಗಮಿಸಿದರು. ಕೆಲ ಹೊತ್ತಿನ ಬಳಿಕ ಬಂದ ಶಾಸಕರಾದ ಜಿ.ಮಂಜುನಾಥ್ ಮತ್ತು ಕೆ.ಆರ್‌.­ರಮೇಶ್‌­ಕುಮಾರ್‌ ಹೊರಗೆ ಇರುವುದಾಗಿ ತಿಳಿಸಿ ನಿರ್ಗಮಿಸಿದರು.

ನೂಕುನುಗ್ಗಲು: ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶವಿರುವ ದಾರಿಯಲ್ಲಿ ಕಾರ್ಯಕರ್ತರನ್ನು ತಡೆಗಟ್ಟಲು ನಿಲ್ಲಿ­ಸಿದ್ದ ಬ್ಯಾರಿಕೇಡ್‌ ಅನ್ನು ನೂಕಿ ಕಾರ್ಯ­ಕರ್ತರ ನುಗ್ಗಿದ ಘಟನೆಯೂ ನಡೆ­ಯಿತು. ತಳ್ಳಾಟಕ್ಕೆ ಕಾರಣರಾದ ಕಾರ್ಯಕರ್ತರನ್ನು ತಡೆಯಲು ಪೊಲೀ­ಸರು ಕೂಡ ಬಲಪ್ರಯೋಗ ಮಾಡ­ಬೇಕಾಯಿತು. ಆದರೂ ಕಾರ್ಯ­ಕರ್ತರು ಮುನಿಯಪ್ಪ ಅವರೊಡನೆ ಜಿಲ್ಲಾ­ಧಿಕಾರಿ ಕಚೇರಿವರೆಗೂ ಬಂದರು.

ಮುನಿಯಪ್ಪ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಚೇರಿಯ ಹೊರಗೆ ನಿಂತಿದ್ದ ಹಲವು ಮುಖಂಡರು, ಕಾರ್ಯಕರ್ತರನ್ನು ಬ್ಯಾರಿಕೇಡ್‌ನಿಂದ ಹೊರಕ್ಕೆ ನಿಲ್ಲಿಸುವ ಪೊಲೀಸರ ಪ್ರಯತ್ನ ಸಫಲವಾಗಲಿಲ್ಲ. ಡಿಎಸ್‌ಪಿ ಕೆ.ಅಶೋಕ್‌ ಕುಮಾರ್‌ ಮಾಡಿದ ಮನವಿಗೂ ಮುಖಂಡರು ಸಕಾರಾ­ತ್ಮಕ­ವಾಗಿ ಸ್ಪಂದಿಸದೇ ನಿಂತಲ್ಲೇ ನಿಂತಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಹೊರಬಂದ ಮುನಿಯಪ್ಪ ಅವರಿಂದ ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮದವರ ಪ್ರಯತ್ನವೂ ಸಫಲ­ವಾಗಲಿಲ್ಲ. ಬ್ಯಾರಿಕೇಡ್‌ನಿಂದ ಆಚೆಗೆ ಎಲ್ಲರನ್ನೂ ಆಚೆ ಕಳಿಸಲಾಯಿತು. ನಂತರ ರಸ್ತೆ ಬದಿಯಲ್ಲೇ ವಾಹನದಲ್ಲಿ ನಿಂತ ಮುನಿಯಪ್ಪ ಕಾರ್ಯಕರ್ತರನ್ನು ಉದ್ದೇಶಿಸಿ ಕೆಲ ನಿಮಿಷ ಮಾತನಾಡಿ­ದರು. ಈ ಸಂದರ್ಭದಲ್ಲಿ ವಾಹನ, ಜನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಭೇಟಿ: ನಾಮಪತ್ರ ಸಲ್ಲಿಸುವುದಕ್ಕೂ ಮುಂಚೆ ಮುನಿಯಪ್ಪ ಮುಳಬಾಗಲು ತಾಲ್ಲೂಕಿನ ಕುರುಡುಮಲೆ ವಿನಾಯಕ ದೇವಾಲಯ, ಮುಳಬಾಗಲಿನ ಆಂಜ­ನೇಯ ದೇವಾಲಯ, ದರ್ಗಾ, ಕೋಲಾರ ತಾಲ್ಲೂಕಿನ ಕೊಂಡರಾಜನ­ಹಳ್ಳಿಯ ಆಂಜನೇಯ ದೇವಾಲಯ, ನಗರದ ಸಾಯಿಮಂದಿರಕ್ಕೆ ಭೇಟಿ ನೀಡಿದ್ದರು. ನಂತರ, ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮತ್ತು ಗಾಂಧಿವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಾಮಪತ್ರ ಸಲ್ಲಿಸಿದ ಬಳಿಕ ಮೆಥೋಡಿಸ್ಟ್ ಚರ್ಚಿಗೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.