ಬಂಗಾರಪೇಟೆ: ತೋಟಿ ಇನಾಂತಿ ಜಮೀನನ್ನು ಉಳುಮೆ ಮಾಡಲು ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಐವಾರಳ್ಳಿ ಗ್ರಾಮದ ತೋಟಿ ನೌಕರಿದಾರರು ಈಚೆಗೆ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.
ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿ ಐವಾರಳ್ಳಿ ಗ್ರಾಮದ ಸರ್ವೆ ನಂಬರ್ 20ರಲ್ಲಿ 2.38 ಎಕರೆ ಜಮೀನನ್ನು ತೋಟಿ ನೌಕರಿದಾರರಾದ ವೆಂಕಟಪ್ಪ, ಗಂಟಪ್ಪ, ಕುಪ್ಪನ್ನ ಎಂಬುವರಿಗೆ ಸರ್ಕಾರ ಮಂಜೂರು ಮಾಡಿದೆ. ಆದರೆ ಇದೇ ಗ್ರಾಮದ ನಿವಾಸಿಯೊಬ್ಬರು ಈ ಜಮೀನನ್ನು ಲಪಟಾಯಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕು ಮಟ್ಟದಿಂದ ಹೈಕೋರ್ಟ್ ತನಕ ಪ್ರಕರಣ ದಾಖಲಿಸಿದರೂ ಎಲ್ಲಾ ಹಂತದಲ್ಲೂ ನಮ್ಮ ಪರವಾಗಿ ತೀರ್ಪು ಆಗಿದೆ. ಆದರೂ ಗುಂಪಿನೊಂದಿಗೆ ತೋಟಿ ನೌಕರರ ಕುಟುಂಬದ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಹಂತದಲ್ಲಿ ಕೋರ್ಟ್ ಹಾಗೂ ಅಧಿಕಾರಿಗಳು ತೋಟಿ ನೌಕರಿದಾರರು ಉಳುಮೆ ಮಾಡಿಕೊಳ್ಳಬಹುದು ಎಂದು ಸೂಚನೆ ನೀಡಿದ್ದಾರೆ. ಆದರೆ ತಹಶೀಲ್ದಾರ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತೋಟಿ ನೌಕರರು ಆರೋಪಿಸಿದ್ದಾರೆ.ಜಮೀನು ಉಳುಮೆ ಮಾಡಲು ಪೊಲೀಸ್ ರಕ್ಷಣೆ ನೀಡುವ ತನಕ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.