ADVERTISEMENT

ರಾಜ್ಯದ ಪ್ರಗತಿ ಸುಳ್ಳು: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 5:50 IST
Last Updated 6 ಏಪ್ರಿಲ್ 2011, 5:50 IST
ರಾಜ್ಯದ ಪ್ರಗತಿ ಸುಳ್ಳು: ಪರಮೇಶ್ವರ್
ರಾಜ್ಯದ ಪ್ರಗತಿ ಸುಳ್ಳು: ಪರಮೇಶ್ವರ್   

ಬಂಗಾರಪೇಟೆ: ರಾಜ್ಯವನ್ನು ಸರ್ವತೋಮುಖ ಪ್ರಗತಿಯತ್ತ ಒಯ್ಯಲಾಗುತ್ತಿದೆ ಎಂಬ ಸುಳ್ಳನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹೇಳುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟೀಕಿಸಿದರು.ಉಪಚುನಾವಣೆ ಪ್ರಚಾರದ ಸಲುವಾಗಿ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಮಕ್ಕಳಿಗೆ ಸೈಕಲ್, ಹೆಂಗಸರಿಗೆ ಸೀರೆ, ರೈತರ ಸಂತೋಷಕ್ಕಾಗಿ ಆಗಾಗ ಹಸಿರು ಶಾಲು ಹೊದ್ದಿದ್ದು ಬಿಟ್ಟರೆ ಇನ್ನೇನನ್ನೂ ರಾಜ್ಯದ ಜನತೆಗೆ ನೀಡಿಲ್ಲ. ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವುದು, ಸರ್ವ ಶಿಕ್ಷಣ ಅಭಿಯಾನದಡಿ ಶಾಲಾ ಕಟ್ಟಡ, ಪುಸ್ತಕ ವಿತರಣೆ, ವಿವಿಧ ಅನುದಾನ ನೀಡುತ್ತಿರುವುದು ಕೇಂದ್ರ ಸರ್ಕಾರ. ಅಂಗನವಾಡಿ ಸಹಾಯಕಿ, ಕಾರ್ಯಕರ್ತರಿಗೆ ಗೌರವ ಧನ ಸಿಗುತ್ತಿರುವುದೂ ಕೇಂದ್ರದ ಅನುದಾನದಡಿಯಲ್ಲಿ. ಪ್ರತಿ ಊರಿನಲ್ಲಿ ಆಸ್ಪತ್ರೆ ಇರುವುದು, ಅದಕ್ಕೆ ಔಷಧಿ, ವೈದ್ಯರಿಗೆ ಸಂಬಳ, ಸವಲತ್ತು ಸಿಗುತ್ತಿರುವುದು ಕೇಂದ್ರದಿಂದಲೇ ಎಂದರು.

ಊರೂರಿನಲ್ಲಿ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣವಾಗುತ್ತಿರುವುದೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ. ಮನೆಗೊಂದು ಶೌಚಾಲಯ ನಿರ್ಮಾಣವಾಗುತ್ತಿರುವುದೂ ನಿರ್ಮಲ ಯೋಜನೆಯಡಿಯಲ್ಲಿ. ಹೀಗೆ ನೂರಾರು ಯೋಜನೆಯಡಿ ಕೇಂದ್ರ ಸರ್ಕಾರ ಜನರ ಒಳಿತನ್ನು ಬಯಸುತ್ತಿದೆ. ಈವರೆವಿಗೂ ರಾಜ್ಯ, ರಾಷ್ಟ್ರದಲ್ಲಿರುವ ಪ್ರತಿಯೊಂದು ರಸ್ತೆ, ಶಾಶ್ವತ ಕಾಮಗಾರಿ, ಕಾರ್ಖಾನೆ ಪ್ರತಿಯೊಂದು ಕಾಂಗ್ರೆಸ್ ಆಡಳಿತದ ಫಲಶೃತಿಯಾಗಿದೆ. ಬಿಜೆಪಿ ನಾಯಕರ ಬಣ್ಣದ ಮಾತುಗಳಿಗೆ ಮೋಸಹೋಗದಿರಿ ಎಂದರು.

ರೋಡ್ ಶೋ ಸಂದರ್ಭದಲ್ಲಿ ಮಾರ್ಗ ಮಧ್ಯೆ ಜೈನರ ದಿಗಂಬರ್ ದೇವಸ್ಥಾನಕ್ಕೆ ಭೇಟಿ ನೀಡಿ ಅವರು ಅಭ್ಯರ್ಥಿ ಪರ ವಿಶೇಷ ಪೂಜೆ ಸಲ್ಲಿಸಿದರು. ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ವಿ.ಆರ್.ಸುದರ್ಶನ್, ಮಾಜಿ ಶಾಸಕ ನಿಸಾರ್ ಅಹ್ಮದ್, ಅನಿಲ್ ಕುಮಾರ್, ಬಿಸೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರ, ಪಾರ್ಥಸಾರಥಿ, ಕೆ.ಚಂದ್ರಾರೆಡ್ಡಿ, ಅಸ್ಲಾಂ ಪಾಷ, ಶಂಶುದ್ದೀನ್‌ಬಾಬು, ಕಿಶೋರ್‌ಕುಮಾರ್, ಬೆಳಗಾನಹಳ್ಳಿ ಮುನಿವೆಂಕಟಪ್ಪ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.