ADVERTISEMENT

ಲೋಕಾಯುಕ್ತ ಬಲೆಗೆ ಆದಾಯ ತೆರಿಗೆ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:10 IST
Last Updated 13 ಅಕ್ಟೋಬರ್ 2011, 9:10 IST

ಕೋಲಾರ: ಆದಾಯ ತೆರಿಗೆ ಹಣ ಹಿಂದಿರುಗಿಸಲು ಲಂಚ ಪಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ                  ಇನ್ಸ್‌ಪೆಕ್ಟರ್ ತಿರುಮಲೈ ಬುಧವಾರ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಕೊಂಡೇನಹಳ್ಳಿ ನಿವಾಸಿ ಶಮಂತಕುಮಾರ್ ಅವರಿಂದ ಒಂದು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಶಮಂತ್‌ಕುಮಾರ್ ಎಲ್‌ಐಸಿ ಏಜೆಂಟರಾಗಿದ್ದರು. 2010ರಲ್ಲಿ 18,190 ರೂಪಾಯಿ ಆದಾಯ ತೆರಿಗೆ ಕಟ್ಟಿದ್ದರು.  ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿದ ನಂತರ ಹಣ ವಾಪಸ್ ಮಾಡಲು ಆದಾಯ ತೆರಿಗೆ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಕಂಪ್ಯೂಟರ್‌ಗೆ ಮಾಹಿತಿ ತುಂಬಲು ತಿರುಮಲೈ ಎರಡು ಸಾವಿರ ರೂಪಾಯಿ ಲಂಚಕ್ಕಾಗಿ ಒತ್ತಾಯಿಸಿದ್ದರು. ಬುಧವಾರ ಸಂಜೆ ಶಮಂತಕುಮಾರ್ ಅವರಿಂದ ಮುಂಗಡ ಒಂದು ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದರು.

ಲೋಕಾಯುಕ್ತ ಎಸ್ಪಿ ಎ.ಬಿ.ಸುಧಾಕರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನಾಗರಾಜ್, ಇನ್ಸ್‌ಪೆಕ್ಟರ್‌ಗಳಾದ ಎಸ್.ಮಂಜುನಾಥ್, ಲೋಕೇಶ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT