ADVERTISEMENT

ಲೋಕಾಯುಕ್ತ ಬಲೆಗೆ ಉಪಪ್ರಾಚಾರ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 7:55 IST
Last Updated 8 ಜೂನ್ 2011, 7:55 IST

ಕೋಲಾರ: ಸಹ ಶಿಕ್ಷಕಿಯ ವೇತನ ಮತ್ತು ಹೆರಿಗೆ ಭತ್ಯೆಯನ್ನು ಮಂಜೂರು ಮಾಡಲು ರೂ. 5 ಸಾವಿರ  ಲಂಚ ಪಡೆಯುವ ಸಂದರ್ಭ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಚಾರ್ಯ ಎಂ.ಎಸ್. ಗುರುದತ್ ಲೋಕಾಯುಕ್ತ ಬಲೆಗೆ ಮಂಗಳವಾರ ಸಿಕ್ಕಿಬಿದ್ದಿದ್ದಾರೆ.

ವಿವರ: ಸಿ.ಎಸ್.ಗೀತಾ ಎಂಬುವವರು ಮೂರು ವರ್ಷದ ಹಿಂದೆ ಪ್ರೌಢಶಾಲೆ ವಿಭಾಗದಲ್ಲಿ ಸಹ ಶಿಕ್ಷಕರಾಗಿದ್ದರು. ನಂತರ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗೆ ಹಾಜರಾಗಿ ಮುಖ್ಯ ಶಿಕ್ಷಕಿಯಾಗಿ ಆಯ್ಕೆಯಾಗಿ ಹಾವೇರಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಮಾಸ್ತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದ ವೇತನ ಮತ್ತು ಹೆರಿಗೆ ಭತ್ಯೆ ಸೇರಿ ಸುಮಾರು 23 ಸಾವಿರ ರೂಪಾಯಿ ಅವರಿಗೆ ದೊರಕಬೇಕಿತ್ತು. ಈ ಸಂಬಂಧ ಅವರು ಮನವಿ  ಸಲ್ಲಿಸಿದ್ದರು.

ಮನವಿಯ ಕುರಿತು ಮಾಹಿತಿ ಪಡೆಯಲು, ಅವರು ಅದೇ ಕಾಲೇಜಿನ ಜೆಒಸಿ ಉಪನ್ಯಾಸಕ ಉಮಾಪತಿ ನಾಯ್ಡು ಅವರಿಗೆ ಮಂಗಳವಾರ ದೂರವಾಣಿ ಮೂಲಕ ಮನವಿ ಮಾಡಿದ್ದರು.

ನಾಯ್ಡು ಉಪ ಪ್ರಾಂಶುಪಾಲರನ್ನು ಸಂಪರ್ಕಿಸಿದಾಗ ಅವರು 5 ಸಾವಿರ ರೂಪಾಯಿ ಲಂಚಕ್ಕೆ ಆಗ್ರಹಿಸಿದರು. ಆ ಕುರಿತು ಮಾಹಿತಿ ಪಡೆದ ಗೀತಾ, ಲೋಕಾಯುಕ್ತ ಪೊಲೀಸರಿಗೆ ತಮ್ಮ ಪರವಾಗಿ ದೂರು ಸಲ್ಲಿಸುವಂತೆ ನಾಯ್ಡು ಅವರಿಗೆ ಮನವಿ ಮಾಡಿದರು.

ಅದರಂತೆ, ನಾಯ್ಡು ಸಲ್ಲಿಸಿದ ಮನವಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಲೇಜಿನಲ್ಲೆ ಲಂಚ ಪಡೆದ ಉಪ ಪ್ರಾಂಶುಪಾಲರನ್ನು ಬಂಧಿಸ ಲಾಯಿತು ಎಂದು ಮೂಲಗಳು ಖಚಿತಪಡಿಸಿವೆ.
ಎಸ್‌ಪಿ ಎ.ಬಿ.ಸುಧಾಕರ್ ಮಾರ್ಗ ದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಎಸ್.ಮಂಜುನಾಥ್, ಲೋಕೇಶ್,

ಸಿಬ್ಬಂದಿ ಎನ್.ಕೃಷ್ಣಪ್ಪ, ವಿಜಯಕುಮಾರ್, ನರಸಿಂಹಯ್ಯ, ದಿನಕರ್, ಶ್ರೀನಿವಾಸ ನಾಯ್ಕ, ಮಂಜುಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.