ಕೋಲಾರ: ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಹಾಗೆ ವಿದೇಶ ಸುತ್ತುತ್ತಾ ಮೋಜು ಮಾಡಿದ್ದರೇ ನಗರಕ್ಕೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಚಿವ ವರ್ತೂರು ಪ್ರಕಾಶ್ ಟೀಕಿಸಿದ್ದಾರೆ.
ತಾಲ್ಲೂಕಿನ ತೊರದೇವಂಡಹಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಆಯ್ಕೆಯಾದ ಪಿ.ವೆಂಕಟರಾಮಯ್ಯ ಅವರನ್ನು ಅಭಿನಂದಿಸಿ ಮಾತನಾಡಿ, ಕಳೆದ 15 ವರ್ಷಗಳಲ್ಲಿ ಅಧಿಕಾರ ಅನುಭವಿಸಿದ ಶ್ರೀನಿವಾಸಗೌಡ ಕೋಲಾರ ಕ್ಷೇತ್ರದ ಅಭಿವೃದ್ಧಿಯತ್ತ ಮುಖ ಕೂಡ ತಿರುಗಿಸಲಿಲ್ಲ. ಸಚಿವರ ನಿರ್ಲಕ್ಷ್ಯಕ್ಕೆ ಕ್ಷೇತ್ರ ಸಂಪೂರ್ಣ ತುತ್ತಾಗಿದ್ದರ ಪರಿಣಾಮವೇ ನಾನು ಈ ಕ್ಷೇತ್ರದ ಶಾಸಕನಾಗಬೇಕಾಯಿತು ಎಂದು ವ್ಯಂಗ್ಯವಾಡಿದ್ದಾರೆ.
ತೊರದೇವಂಡಹಳ್ಳಿ ಗ್ರಾ.ಪಂ.ಯಲ್ಲಿ ತಮ್ಮ ಬಣದಲ್ಲಿ ಉಂಟಾದ ಕೆಲ ಗೊಂದಲಗಳಿಂದ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ. ಇದಕ್ಕೆ ಚಿಂತಿಸಬೇಕಾದ ಅವಶ್ಯಕತೆಯಿಲ್ಲ, ಅಧ್ಯಕ್ಷರ ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾ.ಪಂ. ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿದರು.
ಈ ಸಂದರ್ಭ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ಗೌಡಹಳ್ಳಿ ಕೃಷ್ಣಪ್ಪ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣೇಗೌಡ, ಮುಖೇಶ್, ಆಟೊ ನಾರಾಯಣಸ್ವಾಮಿ, ಬಿ.ಎನ್.ಸೊಣ್ಣಪ್ಪ, ಮೂರಾಂಡಹಳ್ಳಿ ಮಾರಪ್ಪ, ದ್ಯಾವೀರಪ್ಪ, ಮುನಿಸ್ವಾಮಪ್ಪ, ಶಂಕರೇಗೌಡ, ಯಲ್ಲಪ್ಪ, ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ್, ವೆಂಕಟಸ್ವಾಮಿ, ಭಾಗ್ಯಮ್ಮ ವಿಶ್ವನಾಥ್ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.