ADVERTISEMENT

ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಕೆಗೆ ತೆರೆ

ಚುನಾವಣಾಧಿಕಾರಿಗಳ ಕಚೇರಿ ಮುಂದೆ ಅಭ್ಯರ್ಥಿಗಳ ಸಾಲು; ಒಟ್ಟು 151 ಮಂದಿ ಉಮೇದುವಾರಿಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 6:50 IST
Last Updated 25 ಏಪ್ರಿಲ್ 2018, 6:50 IST
ಕ್ಷೇತ್ರವಾರು ನಾಮಪತ್ರ ಸಲ್ಲಿಸಿರುವ ಸಂಖ್ಯೆ
ಕ್ಷೇತ್ರವಾರು ನಾಮಪತ್ರ ಸಲ್ಲಿಸಿರುವ ಸಂಖ್ಯೆ   

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಮಂಗಳವಾರ ತೆರೆಬಿದ್ದಿದ್ದು, ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ 151 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಏ.17ರಂದು ಚುನಾವಣಾ ಅಧಿಸೂಚನೆ ಹೊರಡಿಸಿತ್ತು. ಆರಂಭದ ಐದು ದಿನ ಹೆಚ್ಚಿನ ನಾಮಪತ್ರಗಳು ಸಲ್ಲಿಕೆಯಾಗಿರಲಿಲ್ಲ. ಆದರೆ, ಸೋಮವಾರದಿಂದ (ಏ.23) ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಂಡಿತು.

ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಮಂಗಳವಾರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆಗೆ ಹೆಚ್ಚಿನ ಉತ್ಸಾಹ ತೋರಿದರು. ಒಂದೇ ದಿನ 105 ನಾಮಪತ್ರ ಸಲ್ಲಿಕೆಯಾದವು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.

ADVERTISEMENT

ಜಿಲ್ಲೆಯ ಬಹುಪಾಲು ಚುನಾವಣಾಧಿಕಾರಿಗಳ ಕಚೇರಿ ಮುಂದೆ ಅಭ್ಯರ್ಥಿಗಳು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮುಖ್ಯವಾಗಿ ಮುಳಬಾಗಿಲು ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ಕಚೇರಿ ಮುಂದೆ ಅಭ್ಯರ್ಥಿಗಳ ದೊಡ್ಡ ಸಾಲೇ ಕಂಡುಬಂತು. ಈ ಕ್ಷೇತ್ರದಲ್ಲಿ ಅತಿ ಹೆಚ್ಚು 46 ನಾಮಪತ್ರ ಸಲ್ಲಿಕೆಯಾದವು. ಉಳಿದಂತೆ ಕೆಜಿಎಫ್‌ ಮೀಸಲು ಕ್ಷೇತ್ರ 12, ಕೋಲಾರ ಸಾಮಾನ್ಯ ಕ್ಷೇತ್ರ 13, ಬಂಗಾರಪೇಟೆ ಮೀಸಲು ಕ್ಷೇತ್ರ 5, ಮಾಲೂರು ಸಾಮಾನ್ಯ ಕ್ಷೇತ್ರ 14 ಹಾಗೂ ಶ್ರೀನಿವಾಸಪುರ ಸಾಮಾನ್ಯ ಕ್ಷೇತ್ರದಲ್ಲಿ 15 ನಾಮಪತ್ರ ಸಲ್ಲಿಕೆಯಾದವು.

ಸಂಸದ ಕೆ.ಎಚ್‌.ಮುನಿಯಪ್ಪ ಅವರ ಎರಡನೇ ಪುತ್ರಿ ಎಂ.ನಂದಿನಿ ಹಾಗೂ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್‌ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು. ಈ ಇಬ್ಬರು ಕ್ರಮವಾಗಿ ಮುಳಬಾಗಿಲು ಹಾಗೂ ಕೋಲಾರ ಕ್ಷೇತ್ರದಲ್ಲಿ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದರು.

ರೋಡ್‌ ಶೋ: ಅಭ್ಯರ್ಥಿಗಳು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್‌ ಶೋ ನಡೆಸಿದರು. ಕಾರ್ಯಕರ್ತರು ರೋಡ್‌ ಶೋ ಉದ್ದಕ್ಕೂ ತಮ್ಮ ಪಕ್ಷ ಮತ್ತು ಅಭ್ಯರ್ಥಿಗಳ ಪರ ಜೈಕಾರ ಕೂಗಿದರು. ಅಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿದರು.

ಹಲವು ಅಭ್ಯರ್ಥಿಗಳು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ಮತ್ತೆ ಕೆಲವರು ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣಾಧಿಕಾರಿಗಳ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಬ್ಯಾರಿಕೇಡ್‌ ಹಾಕಲಾಗಿತ್ತು. ಜತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಮುಳಬಾಗಿಲು ಹೆಚ್ಚು: ಒಟ್ಟಾರೆ ಎಂಟು ದಿನಗಳಲ್ಲಿ 220 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಮುಳಬಾಗಿಲು ಕ್ಷೇತ್ರದಲ್ಲೇ ಅತಿ ಹೆಚ್ಚು 76 ನಾಮಪತ್ರ ಸಲ್ಲಿಕೆಯಾಗಿವೆ. ಕೆಲ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ, ಮತ್ತೆ ಕೆಲವರು ಎರಡೆರಡು ಬಾರಿ ನಾಮಪತ್ರ ಹಾಕಿದ್ದಾರೆ. ಕೆಜಿಎಫ್‌ನಲ್ಲಿ 37, ಕೋಲಾರದಲ್ಲಿ 32, ಬಂಗಾರಪೇಟೆಯಲ್ಲಿ 21, ಮಾಲೂರಿನಲ್ಲಿ 28 ಹಾಗೂ ಶ್ರೀನಿವಾಸಪುರದಲ್ಲಿ 26 ನಾಮಪತ್ರ ಸಲ್ಲಿಕೆಯಾಗಿವೆ.

ಬುಧವಾರದಿಂದ (ಏ.25) ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ಏ.27 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳಲ್ಲಿನ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಕಸರತ್ತು ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.