ADVERTISEMENT

ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 8:43 IST
Last Updated 3 ಮಾರ್ಚ್ 2014, 8:43 IST

ಶ್ರೀನಿವಾಸಪುರ: ತಾಲ್ಲೂಕಿನ ವಿದ್ಯಾರ್ಥಿ­ಗಳು ಏಕಲವ್ಯ ಶಾಲೆಯ ಪ್ರಯೋಜನ ಪಡೆದು ಶೈಕ್ಷಣಿಕವಾಗಿ ಮುಂದೆ ಬರ­ಬೇಕು ಎಂದು ಕೇಂದ್ರ ಸಚಿವ ಕೆ.ಎಚ್‌.­ಮುನಿಯಪ್ಪ ಹೇಳಿದರು.

ತಾಲ್ಲೂಕಿನ ಪುಲಗೂರುಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗನ್ನಗಾರಿಹಳ್ಳಿ ಗ್ರಾಮದ ಸಮೀಪ ಭಾನುವಾರ ₨ 14 ಕೋಟಿ ವೆಚ್ಚ­ದಲ್ಲಿ ಕೇಂದ್ರ ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ಏಕಲವ್ಯ ವಸತಿ ಶಿಕ್ಷಣ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶೀಘ್ರವಾಗಿ ಟೆಂಡರ್‌ ಕರೆದು ಮೂರು ತಿಂಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸ­ಲಾಗುವುದು ಎಂದು ಹೇಳಿದರು.

ಅರ್ಹ ರೈತರಿಗೆ ₨ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಕೃಷಿಕರು, ಕೃಷಿ ಕಾರ್ಮಿಕರ ಹಿತದೃಷ್ಟಿ­ಯಿಂದ ಕೇಂದ್ರ, ರಾಜ್ಯ ಸರ್ಕಾರ­ ಹಲ ಯೋಜನೆ­ಗಳನ್ನು ಜಾರಿಗೆ ತಂದಿವೆ ಎಂದರು.

ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಾತನಾಡಿ, ಗಡಿ ಭಾಗದ ಜನರ ಪಾಲಿಗೆ ಏಕಲವ್ಯ ವಸತಿ ಶಿಕ್ಷಣ ಶಾಲೆ ವರದಾನವಾಗಿದೆ. ಹಿಂದುಳಿದ ಪಂಗಡ, ಇತರ ವರ್ಗದ ವಿದ್ಯಾರ್ಥಿಗಳು ಇಲ್ಲಿ ದೊರೆಯುವ ಉತ್ತಮ ಶಿಕ್ಷಣದ ಅನುಕೂಲ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗ­ಬೇಕು ಎಂದು ಹೇಳಿದರು.

ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ವಿಶೇಷ ಕಾಳಜಿ ವಹಿಸಿದ ಪರಿಣಾಮ ಶ್ರೀನಿವಾಸಪುರ ತಾಲ್ಲೂ­ಕಿಗೆ ರೈಲು ಬೋಗಿ ಕಾರ್ಖಾನೆ ಮಂಜೂರಾಗಿದೆ. ಇದರಿಂದ ಇಲ್ಲಿನ ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಮಾ.5ರಂದು ಮುಖ್ಯ ಮಂತ್ರಿ ಸಿದ್ದ­ರಾಮಯ್ಯ ರೈಲ್ವೆ ಕೋಚ್‌ ಫ್ಯಾಕ್ಟರಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ಗೋವಿಂದಸ್ವಾಮಿ, ವಾಣಿ ಕೃಷ್ಣಾರೆಡ್ಡಿ, ಎಲ್‌.­ಗೋಪಾಲ­ಕೃಷ್ಣ, ವಿ.ವೆಂಕಟಮುನಿಯಪ್ಪ, ಅನಿಲ್‌ ಕುಮಾರ್‌, ಶೇಷಾಪುರ ಗೋಪಾಲ್, ಅಕ್ಬರ್‌ ಷರೀಫ್‌, ಮಾರುತಿ ರೆಡ್ಡಿ, ಬಿ.ಎಲ್‌.ರಾಮಣ್ಣ, ಜಿ.ರಾಜಣ್ಣ, ವೆಂಕ­ಟಾದ್ರಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಳೆ: ಸಮಾರಂಭ ಪ್ರಾರಂಭ­ವಾಗುತ್ತಿದ್ದಂತೆ ಮಳೆ ಸುರಿಯಲು ಪ್ರಾರಂಭಿ­ಸಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಕುರ್ಚಿ ಹಾಗೂ ಟವಲ್‌ಗಳನ್ನು ತಲೆ ಮೇಲೆ ಇಟ್ಟುಕೊಂಡು ಮಳೆಯಿಂದ ರಕ್ಷಣೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.