ಕೆಜಿಎಫ್: ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿ ಜೈಲು ಸೇರಿರುವ ಶಾಸಕ ವೈ.ಸಂಪಂಗಿ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ರಾಬರ್ಟ್ಸನ್ಪೇಟೆಯಲ್ಲಿ ಶನಿವಾರ ಪ್ರತಿಭಟನೆ ಮೆರವಣಿಗೆ ನಡೆಸಿ, ಪ್ರತಿಕೃತಿ ದಹಿಸಿದರು.
ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಪಂಗಿ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಜನತೆಗೆ ಅವಮಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗುವ ಬದಲು ದಲಿತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ದಲಿತ ಎಂದು ಹೇಳಿಕೊಂಡು ನಗರದಲ್ಲಿ ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಪಿಎಂ ಮುಖಂಡ ಅರ್ಜುನನ್ ಆರೋಪಿಸಿದರು.
ಸಿಐಟಿಯು ಮುಖಂಡ ತಂಗರಾಜ್ ಮಾತನಾಡಿ, ಅಡ್ವಾಣಿಯವರು ಭ್ರಷ್ಟಾಚಾರ ವಿರೋಧಿಸಿ ನಡೆಸುತ್ತಿರುವ ರಥಯಾತ್ರೆಯನ್ನು ಕೂಡಲೇ ರದ್ದುಗೊಳಿಸಬೇಕು. ಈಗ ಬಿಜೆಪಿಯಲ್ಲಿ ಸಭ್ಯ ನಾಯಕರೇ ಇಲ್ಲ. ಒಬ್ಬರ ನಂತರ ಮತ್ತೊಬ್ಬರು ಜೈಲು ಸೇರುತ್ತಿದ್ದಾರೆ. ಈಗ ಕೆಜಿಎಫ್ ಶಾಸಕರೂ ಕೂಡ ಜೈಲು ಸೇರಿದ್ದಾರೆ. ಶಾಸಕರು ಆತ್ಮಗೌರವವಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಅಂಚೆ ಕಚೇರಿ ಮುಂಭಾಗದಲ್ಲಿ ಶಾಸಕರ ಪ್ರತಿಕೃತಿ ಸುಟ್ಟುಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.