ADVERTISEMENT

ಸಶಸ್ತ್ರ ಮೀಸಲು ಪಡೆ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 5:45 IST
Last Updated 1 ಅಕ್ಟೋಬರ್ 2012, 5:45 IST

ಕೋಲಾರ: ನಗರದ ಎಂಬಿ ರಸ್ತೆಯ ವಿಸ್ತರಣೆ ಕಾಮಗಾರಿಗೆ ಅಡ್ಡಿಯಾಗಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಟ್ಟಡವನ್ನು ಭಾನುವಾರ ತೆರವುಗೊಳಿಸಲಾಯಿತು. ಆ ಮೂಲಕ ರಸ್ತೆ ವಿಸ್ತರಣೆಯ ಒಂದು ಬದಿಯ ಕಾಮಗಾರಿಗೆ ಯಾವುದೇ ತಡೆ ಇಲ್ಲದಂತಾಗಿದೆ.

ಹೊಸ ಬಸ್ ನಿಲ್ದಾಣದಿಂದ ಶುರುವಾಗಿದ್ದ ವಿಸ್ತರಣೆ ಕಾಮಗಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಟ್ಟಡವರೆಗೂ ನಡೆದು ಸ್ಥಗಿತಗೊಂಡಿತ್ತು. ಆ ಕಟ್ಟಡವನ್ನು ಹೊರತುಪಡಿಸಿ ಕಾಮಗಾರಿಯನ್ನು ಮುಂದುವರಿಸಲಾಗಿತ್ತು. ಕಟ್ಟಡದ ಅಕ್ಕ-ಪಕ್ಕದಲ್ಲಿದ್ದ ಸಾರ್ವಜನಿಕರ ಎಲ್ಲ ಕಟ್ಟಡಗಳನ್ನೂ ತೆರವುಗೊಳಿಸಲಾಗಿತ್ತು.

ರಸ್ತೆ ವಿಸ್ತರಣೆಗಾಗಿ ಕಟ್ಟಡ ಮತ್ತು ಕಾಂಪೌಂಡ್ ಕೆಡವಲು ಪೊಲೀಸ್ ಇಲಾಖೆಯು ಅವಕಾಶ ನೀಡಿರಲಿಲ್ಲ. ಇಲಾಖೆಯ ಮೇಲಧಿಕಾರಿಗಳಿಂದ ಅನುಮತಿ ಪಡೆದು ಅವಕಾಶ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಲಾಗಿತ್ತು. 

ಪೊಲೀಸ್ ಇಲಾಖೆಯ ಕಟ್ಟಡವನ್ನು ಕಾಮಗಾರಿ ವ್ಯಾಪ್ತಿಯಿಂದ ಹೊರತುಪಡಿಸಿದ ಸಂಗತಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಉಂಟುಮಾಡಿತ್ತು.

ವಸತಿ ಗೃಹ: ರಸ್ತೆಯ ಮತ್ತೊಂದು ಬದಿಯಲ್ಲಿ, ಮೀಸಲು ಪಡೆ ಕಟ್ಟಡದ ಎದುರಿಗೇ ಇರುವ ಪೊಲೀಸ್ ವಸತಿಗೃಹ ಸಮುಚ್ಛಯವನ್ನು ಯಾವಾಗ ಕೆಡವಲಾಗುತ್ತದೆ ಎಂಬುದು ಸದ್ಯದ ಪ್ರಶ್ನೆ. ವಸತಿಗೃಹ ಸಮುಚ್ಛಯದವರೆಗೂ ಎಲ್ಲ ಕಟ್ಟಡಗಳನ್ನು ಕೆಡವಲಾಗಿದೆ. ಸಮುಚ್ಛಯದ ಮತ್ತೊಂದು ಬದಿಯ ಕಟ್ಟಡಗಳನ್ನೂ ಮೆಕ್ಕೆವೃತ್ತದವರೆಗೂ ಕೆಡಲವಾಗಿದೆ.

ವಸತಿಗೃಹ ಸಮುಚ್ಛಯವನ್ನು ಕೆಡವಿದರೆ ರಸ್ತೆ ವಿಸ್ತರಣೆ ಕಾಮಗಾರಿಗೆ ಇನ್ನು ಯಾವ ಅಡೆತಡೆಯೂ ಇರುವುದಿಲ್ಲ. ಇಲಾಖೆ ಬೇಗ ಅವಕಾಶ ನೀಡಿದರೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎನ್ನುತ್ತವೆ ಲೋಕೋಪಯೋಗಿ ಮೂಲಗಳು.

ಇಂದು ಸಂವಾದ ಸಭೆ
ಚಿಕ್ಕಬಳ್ಳಾಪುರ: ವಿದ್ಯುತ್ ಸಮಸ್ಯೆ ಮತ್ತು ಅಹವಾಲುಗಳಿಗೆ ಸಂಬಂಧಿಸಿದಂತೆ ನಗರದ ಬೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆಯು ಸೋಮವಾರ (ಅಕ್ಟೋಬರ್ 1) ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ ನಡೆಯಲಿದೆ. ಆಸಕ್ತರು ಸಭೆಯಲ್ಲಿ ಪಾಲ್ಗೊಂಡು ಅಹವಾಲುಳನ್ನು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.