ADVERTISEMENT

ಸಾವಯವ ಕೃಷಿಗೆ ಒತ್ತು ನೀಡಿ: ಕೆ.ಎಚ್.ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 9:15 IST
Last Updated 17 ಫೆಬ್ರುವರಿ 2011, 9:15 IST

ಕೋಲಾರ: ಉತ್ತಮ ಪರಿಸರ ಮತ್ತು ಆರೋಗ್ಯಕ್ಕಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.ಹಲವು ವರ್ಷಗಳ ಬಳಿಕ ತಾಲ್ಲೂಕಿನ ಷಾಪೂರು ಗ್ರಾಮದಲ್ಲಿ ಮತ್ತೆ ಆರಂಭವಾದ ಸಂತೆಯನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಅನೇಕ ತೊಂದರೆಗಳು ಎದುರಾಗಿವೆ. ಮನುಷ್ಯ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಗಿಡ ಮರಗಳಿಗೂ ಹಾನಿ ಸಂಭಸುತ್ತಿದೆ ಎಂದರು.
ಪ್ರತಿ ಹೋಬಳಿ ಕೇಂದ್ರದಲ್ಲೂ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ನೀಡುವ ಮೂಲಕ ಸರಳ ಮದುವೆಗಳಿಗೆ ಅವಕಾಶ ನೀಡಿ ರೈತರನ್ನು ಸಾಲದ ಹೊರೆಯಿಂದ ದೂರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟಿಸಿದ ಅವರು, ಭವನದಲ್ಲಿ ಅಡುಗೆ ಮನೆಗಾಗಿ 2 ಲಕ್ಷ ರೂಪಾಯಿ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಒದಗಿಸಿಕೊಡುವ ಭರವಸೆ ನೀಡಿದರು.ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ರಾಜಕೀಯ ಬೆರಸದೆ ದಿಟ್ಟ ಹೋರಾಟ ನಡೆಸುವ ಅಗತ್ಯವಿದೆ ಎಂದರು. ಫೆ.17ರಂದು ಮುಖ್ಯಮಂತ್ರಿಗಳು ಜಿಲ್ಲೆಯ ಶಾಶ್ವತ ನೀರಾವರಿ ಕುರಿತು ಚರ್ಚಿಸಲು ಸಭೆ ಏರ್ಪಡಿಸಿರುವುದು ಸ್ವಾಗತಾರ್ಹ. ಜಿಲ್ಲೆಯ ಎಲ್ಲ ಮುಖಂಡರು ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವೆವು ಎಂದರು,

ಜಿ.ಪಂ ಸದಸ್ಯ ಹರೀಶ್, ಸಹಕಾರಿ ಒಕ್ಕೂಟದ ನಿರ್ದೇಶಕ ಹೊಳಲಿ ಪ್ರಕಾಶ್, ಷಾಪೂರು ಗ್ರಾ.ಪಂ ಅಧ್ಯಕ್ಷೆ ಜಬೀನಾ, ತಾ.ಪಂ ಸದಸ್ಯೆ ಮುದ್ದುಮಣಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ಅಧ್ಯಕ್ಷ ಬಿಸ್ಸೇಗೌಡ, ಎಸ್.ಕೆ.ಕೋದಂಡರಾಮಶೆಟ್ಟಿ, ಯುವ ಕಾಂಗ್ರೆಸ್‌ನ ಗೋಪಾಲರೆಡ್ಡಿ, ಬೆಳಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.