ADVERTISEMENT

ಸಿಇಟಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:24 IST
Last Updated 20 ಡಿಸೆಂಬರ್ 2013, 6:24 IST

ಮುಳಬಾಗಲು: ವೃತ್ತಿ ಶಿಕ್ಷಣ ಕಾಯ್ದೆ–2006 ಜಾರಿ ವಿರೋಧಿಸಿ  ತಾಲ್ಲೂಕು ಎಸ್ಎಫ್ಐ ಕಾರ್ಯ­­ಕರ್ತರು ಗುರುವಾರ ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.

  ಸರ್ಕಾರ ಸಿಇಟಿ ಮೂಲಕವೇ ವೃತ್ತಿ ಶಿಕ್ಷಣ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿ ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ರೂಪಿಸುವುದರ ಜತೆ ಎಲ್ಲ ಸರ್ಕಾರಿ ಕಾಲೇಜುಗಳಿಗೆ ಅತ್ಯಾಧುನಿಕ ಸೌಕರ್ಯ ಒದ­ಗಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗೆ ಉಪ ತಹಶೀಲ್ದಾರ್‌ ಕೊಂಡಪ್ಪ ಮೂಲಕ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಎಫ್ಐ ಮುಖಂಡ ವಾಸು­ದೇವರೆಡ್ಡಿ, ತಾಲ್ಲೂಕು ಎಸ್‌ಎಫ್ಐ ಅಧ್ಯಕ್ಷ ಆರ್‌.ಮಂಜು­ನಾಥ್, ಕಾರ್ಯದರ್ಶಿ ಸುನೀಲ್ ಕುಮಾರ್‌, ಗಣೇಶ್, ಶಿವ, ಯಾಸ್ಮಿನ್, ರಾಜು ಮುಂತಾದವರು ಇದ್ದರು.

ಕೆಜಿಎಫ್‌ನಲ್ಲೂ ಆಕ್ರೋಶ
ಕೆಜಿಎಫ್‌: ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ­ದಿಂದ ವಂಚಿತರನ್ನಾಗಿ ಮಾಡಲು ಪ್ರಸ್ತಾವವಿರುವ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ನೂತನ ಕಾಯ್ದೆ ಜಾರಿ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿ­ಭಟನಾ ಮೆರವಣಿಗೆ ನಡೆಸಿದರು.

ಸಲ್ದಾನ ವೃತ್ತದ ಬಳಿಯಿಂದ ಮೆರಣಿಗೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು.

   ಉನ್ನತ ಶಿಕ್ಷಣವನ್ನು ಸುಲಭವಾಗಿ ಪಡೆಯಲು ಅನುಕೂಲವಾಗಿದ್ದ ವ್ಯವಸ್ಥೆಯನ್ನು ಹಾಳು ಮಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಹುನ್ನಾರಕ್ಕೆ ಸರ್ಕಾರ ಬಲಿಯಾಗಿರುವುದು ಖಂಡನೀಯ ಎಂದು ವಿದ್ಯಾರ್ಥಿ ಮುಖಂಡರು ಆರೋ­­ಪಿ­­­ಸಿ­­ದರು. ಸರ್ಕಾರಕ್ಕೆ ಬಡ ವಿದ್ಯಾರ್ಥಿಗಳ ಮೇಲೆ ನಿಜವಾದ ಅನುಕಂಪವಿದ್ದರೆ ಕೂಡಲೇ  ಹಳೇ ಪದ್ಧತಿಯನ್ನೇ ಜಾರಿಗೊಳಿಸಬೇಕು ಎಂದರು.

ನಂತರ ನಾಡಕಚೇರಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಸುನಿಲ್‌ಕುಮಾರ್, ನವೀನ್‌, ಅಭಿಷೇಕ್‌, ಹನು­ಮಂತು, ದಿಲೀಪ್‌, ಶಿವ, ಸುಬ್ರಹ್ಮಣಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT