ADVERTISEMENT

ಸಿಗದ ಸಿಲಿಂಡರ್ ; ಗ್ರಾಹಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 11:45 IST
Last Updated 12 ಅಕ್ಟೋಬರ್ 2012, 11:45 IST

ಕೋಲಾರ: ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಭಾರತ್ ಗ್ಯಾಸ್ ವಿತರಕರು ಅಡುಗೆ ಅನಿಲ ವಿತರಣೆಯಲ್ಲಿ ಗ್ರಾಹಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿ ಗ್ರಾಹಕರು ಸುಮಾರು ಅರ್ಧ ಗಂಟೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.

ಅಡುಗೆ ಅನಿಲ ವಿತರಕರು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಗ್ಯಾಸ್ ಬುಕ್ ಮಾಡಿದ ನಂತರ ನಿಗದಿತ ದಿನದಂದು ಗ್ಯಾಸ್ ವಿತರಣೆ ಮಾಡುತ್ತಿಲ್ಲ. ಅಕ್ರಮ ಗ್ಯಾಸ್ ವಿತರಣೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಹೆಚ್ಚು ಹಣ ನೀಡಿದರೆ ತಕ್ಷಣವೇ ಇನ್ನೊಂದು ಮಾರ್ಗದಲ್ಲಿ ಸಿಲಿಂಡರ್ ಸಿಗುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಏಜೆನ್ಸಿಯ ಸಿಬ್ಬಂದಿ, ಪ್ರತಿನಿತ್ಯ 120 ಸಿಲಿಂಡರ್ ಅವಶ್ಯಕತೆ ಇದೆ. ಆದರೆ  40ರಿಂದ 50 ಸಿಲಿಂಡರ್ ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಅದೂ ಅಲ್ಲದೆ ಸದರಿ ಗ್ಯಾಸ್ ಏಜನ್ಸಿ ಚಿಂತಾಮಣಿ ಗ್ಯಾಸ್ ಏಜೆನ್ಸಿಯ ಸಬ್ ಏಜೆನ್ಸಿಯಾಗಿರುವುದರಿಂದ ಹೆಚ್ಚುವರಿ ಸಿಲಿಂಡರ್ ಬರುತ್ತಿಲ್ಲ ಎಂದು ಸಮಜಾಯಿಸಿ ನೀಡಿದರು.

ಪ್ರತಿಭಟನಾನಿರತರು ಕೋಲಾರ- ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು.
ಇದರಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ವಾಹನಗಳು ಸಾಲುಗಟ್ಟಿ ನಿಂತವು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.

ಗ್ಯಾಸ್ ಏಜೆನ್ಸಿ ಮಾಲೀಕರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಶ್ರಮಿಸುವುದಾಗಿ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.