ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬೆಳೆಯಲಾಗಿರುವ ಬೀನ್ಸ್ ಬೆಳೆ ಕಾಯಿ ಬಿಡುವ ಹಂತದಲ್ಲಿದ್ದು, ಸುರುಗು ರೋಗದಿಂದ ಸೊರಗುತ್ತಿದೆ. ಇದರಿಂದಾಗಿ ಬೆಳೆಗಾರರಿಗೆ ಹಾಕಿದ ಬಂಡವಾಳಕ್ಕೂ ಸಂಚಕಾರ ಬಂದಿದೆ. ಈ ಹಿಂದೆ ಬೀನ್ಸ್ಗೆ ಒಳ್ಳೆ ಬೆಲೆ ಬಂದ ಪರಿಣಾಮವಾಗಿ ರೈತರು ತಮ್ಮ ಕೊಳವೆ ಬಾವಿಗಳ ಆಶ್ರಯದಲ್ಲಿ ಬೀನ್ಸ್ ಬೆಳೆದಿದ್ದಾರೆ. ಪ್ರಾರಂಭದಲ್ಲಿ ಬಳ್ಳಿಗಳು ಆರೋಗ್ಯವಾಗಿ ಬೆಳೆದವಾದರೂ, ಹೂ, ಪಿಂದೆ ಹಂತದಲ್ಲಿ ಸುರುಗು ರೋಗ ಕಾಣಿಸಿಕೊಂಡು ಎಲೆಗಳು ಒಣಗುತ್ತಿದ್ದು, ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಅದರೊಂದಿಗೆ ಅಂಗಮಾರಿ ರೋಗ ಜೊತೆಯಾಗಿ ಗಿಡಗಳು ಸಾಯುತ್ತಿವೆ.
ಹಿಂದಿನ ಬೆಲೆಗೆ ಹೋಲಿಸಿದರೆ ಬೀನ್ಸ್ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದು, ಬೆಳೆ ವಿಫಲತೆಯಿಂದ ಹೆಚ್ಚು ಬೇಡಿಕೆಯ ಈ ತರಕಾರಿ ತುಟ್ಟಿಯಾಗುವ ಲಕ್ಷಣ ಕಂಡುಬರುತ್ತಿದೆ.
ನೆಲ ಬೀನ್ಸ್ಗೆ ಹೋಲಿಸಿದರೆ, ಬಳ್ಳಿ ಬೀನ್ಸ್ ಬೆಲೆಯಲು ಹೆಚ್ಚು ಖರ್ಚು ಬರುತ್ತದೆ. ಆದರೆ ಇರುವ ಕಾಯಿಯೂ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಬೇಸಿಗೆಯಲ್ಲಿ ಒಳ್ಳೆ ಲಾಭ ಸಿಗಬಹುದೆಂದು ಬಳ್ಳಿ ಬೀನ್ಸ್ ಬೆಳೆ ಇಟ್ಟೆ. ಪ್ರಾರಂಭದಿಂದಲೂ ಕಾಲ ಕಾಲಕ್ಕೆ ಸರಿಯಾಗಿ ಔಷಧಿ ಸಿಂಪಡಣೆ ಮಾಡುತ್ತಿದ್ದರೂ, ರೋಗಬಾಧೆ ಬೆಳೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಉತ್ಪನ್ನದ ಬೆಲೆ ಬೇರೆ ಕಡಿಮೆಯಾಗಿದೆ. ಇದರಿಂದ ಹಾಕಿದ ಬಂಡವಾಳವೂ ಕೈಗೆ ಬರುತ್ತಿಲ್ಲ ಎಂದು ನಲ್ಲಪ್ಪಲ್ಲಿ ಗ್ರಾಮದ ಬೀನ್ಸ್ ಬೆಳೆಗಾರ ಈರಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.