ADVERTISEMENT

‘ಸೋಲಿನ ಭೀತಿಯಲ್ಲಿ ಬಣ್ಣಕಟ್ಟುವುದು ಕಾಂಗ್ರೆಸ್ ಕೆಲಸ’

ವಿಧಾನಸಭೆ ಸದಸ್ಯ ರಮೇಶ್‌ ಬಾಬು ಆರೋಪ

​ಪ್ರಜಾವಾಣಿ ವಾರ್ತೆ
Published 14 ಮೇ 2018, 10:22 IST
Last Updated 14 ಮೇ 2018, 10:22 IST

ಕೋಲಾರ: ‘ಯಾವುದೇ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಎದುರಾದಾಗ ಮತ್ತೊಂದು ಪಕ್ಷದ ವಿರುದ್ಧ ಹೊಂದಾಣಿಕೆಯ ಬಣ್ಣ ಕಟ್ಟುವುದೆ ಅವರ ಕೆಲಸ’ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ನವರು ಅಲ್ಪ ಸಂಖ್ಯಾತರ ಮತದಾರರನ್ನು ಸೆಳೆಯಲು ಕಟ್ಟಿದ ಬಣ್ಣ’ ಎಂದು ವಾಗ್ದಾಳಿ ನಡೆಸಿದರು.

‘ಜನಕ್ಕೆ ತೃಪ್ತಿಯಾಗುವ ರೀತಿ ಕೆಲಸ ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಮತದಾರರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ನಡೆಸಿದ ದುರಾಡಳಿತದಿಂದ ಜನ ಜೆಡಿಎಸ್‌ನತ್ತ ಮುಖ ಮಾಡಿದನ್ನು ಸಹಿಸಲಾರದೆ ಈ ಬಣ್ಣ ಕಟ್ಟಿದರು. ಅವರಿಗೆ ಇದಕ್ಕಿಂತ ಬೇರೆ ಕೆಲಸ ಯಾವುದು ಇಲ್ಲ’ ಎಂದು ಟೀಕಿಸಿದರು.

ADVERTISEMENT

‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಸಮೀಕ್ಷೆಗಳಿಗೆ ಯಾರು ಕಿವಿಗೊಡಬಾರದು. ಇದನ್ನು ನೋಡಿದ ಮಾತ್ರ ಜನ ಯಾರು ನಂಬಲ್ಲ. ಯಾರಿಗೆ ಬಹುಮತ ಬರುತ್ತದೆ ಎಂಬುದು ಮೇ 15ರಂದು ತಿಳಿಯುತ್ತದೆ’ ಎಂದು ಹೇಳಿದರು.

‘ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಜಿಲ್ಲೆಯಾದ್ಯಂತ ಜನರೇ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಇಲ್ಲಿನ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದಾರೆ. ಅವರ ಆಶೀರ್ವಾದವೇ ಗೆಲುವಿನ ಮುನ್ಸೂಚನೆ’ ಎಂದು ಅಭಿಪ್ರಾಯಪಟ್ಟರು.

‘ಅಲ್ಪ ಸಂಖ್ಯಾತರ ಮತಗಳನ್ನು ಸೆಳೆಯಲು ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟಿರುವ ಬಣ್ಣ. ನಾಲ್ಕು ವರ್ಷ ಅಧಿಕಾರದಲ್ಲಿದ್ದು ಏನು ಸಾಧನೆ ಮಾಡಿದ್ದಾರೆ ಎಂಬುದು ಜನಕ್ಕೆ ಗೊತ್ತಾಗಿ, ಬದಲಾವಣೆ ಬಯಸಿದ ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಮಾಡಿರುವ ಕುತಂತ್ರ’ ಎಂದರು.

‘ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದರೆ ಅಲ್ಪ ಸಂಖ್ಯಾತರ ಮತದಾರರನ್ನು ಸೆಳೆಯ ಬಹುದು ಎಂಬ ಭ್ರಮೆಯಲ್ಲಿದ್ದರು. ಆದರೆ ಈ ಭಾರಿ ಅವರು ಸಹ ಬದಲಾವಣೆಯಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಅತಿ ಹೆಚ್ಚು ಅಲ್ಪ ಸಂಖ್ಯಾತರ ಮುಖಂಡರ ಹತ್ಯೆ ನಡೆಯಿತು. ಯಾರು ಮಾಡಿಸಿದರು ಎಂಬುದು ಸರ್ಕಾರಕ್ಕೆ ಗೊತ್ತಿತ್ತು. ಹತ್ಯೆಯಾದ ಜಿಲ್ಲೆಗಳಲ್ಲಿ ಇದ್ದ ಕಾಂಗ್ರೆಸ್ ಸಚಿವರು ಆರೋಪಿಗಳಿಗೆ ಶಿಕ್ಷೆ ವಿಧಿಸುವ ಕೆಲಸ ಮಾಡಲಿಲ್ಲ. ಇದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ’ ಎಂದು ಟೀಕಿಸಿದರು.

‘ಜೂನ್ 8ರಂದು ವಿಧಾನ ಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮುಂದಿನ ವಾರ ನಾಮ ಪತ್ರ ಸಲ್ಲಿಸುತ್ತೆನೆ. ಹಿಂದಿನ ಚುನಾವಣೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ್ದೆ. ಈ ಬಾರಿ ಇನ್ನೂ ಹೆಚ್ಚಿನ ಮತಗಳ ಹಂತರದಿಂದ ಗೆಲುವು ಸಾಧಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.