ADVERTISEMENT

ಸ್ವರ್ಣ ರೈಲು ಬದಲಾವಣೆಗೆ ತಡೆ

ಕೊನೆ ಕ್ಷಣದಲ್ಲಿ ಬದಲಾವಣೆ: ಸಾರ್ವಜನಿಕರಲ್ಲಿ ಉಂಟಾಗಿದ್ದ ಆತಂಕ ದೂರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 10:26 IST
Last Updated 2 ಜೂನ್ 2018, 10:26 IST

ಕೆಜಿಎಫ್‌: ಮಾರಿಕುಪ್ಪಂನಿಂದ ಬೆಂಗಳೂರಿಗೆ ಹೋಗುವ ಸ್ವರ್ಣ ರೈಲನ್ನು ಶುಕ್ರವಾರದಿಂದ ಬದಲಾಯಿಸಲು ನಿರ್ಧರಿಸಿದ್ದ ರೈಲ್ವೆ ಇಲಾಖೆ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡದ ಕಾರಣ, ನಗರದ ಸಾರ್ವಜನಿಕರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.

ಮೂವಿಂಗ್ ಇಂಡಸ್ಟ್ರಿ ಎಂಬ ಹೆಸರಿನಲ್ಲಿ ಜನಪ್ರಿಯಗೊಂಡಿರುವ ಸ್ವರ್ಣರೈಲು ನಗರದ ಜೀವನಾಡಿಯಾಗಿದೆ. ಪ್ರತಿನಿತ್ಯ ಮಾರಿಕುಪ್ಪಂನಿಂದ ಶುರುವಾಗಿ ನಗರದ ಐದು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಬೆಂಗಳೂರಿಗೆ ಹೋಗಿ, ಮತ್ತೆ ಸಂಜೆ ಬೆಂಗಳೂರಿನಿಂದ ಹೊರಟು ರಾತ್ರಿ ನಗರಕ್ಕೆ ಬರುವ ರೈಲಿನಲ್ಲಿ ನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ.

ಕೆಲ ಸಮಯದ ಹಿಂದೆ ಈ ರೈಲನ್ನು ತೆಗೆದು ಮೆಮು ರೈಲನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿತ್ತು. ಆದರೆ ಜನರ ಪ್ರತಿಭಟನೆಯಿಂದ ಒಂದು ದಿನಕ್ಕೆ ಮೆಮು ರೈಲನ್ನು ಓಡಿಸಿ ನಂತರ ರದ್ದುಗೊಳಿಸಲಾಗಿತ್ತು. ಸಾಂಪ್ರದಾಯಿಕ ರೈಲನ್ನು ಮತ್ತೆ ಜಾರಿಗೆ ತಂದಿತ್ತು.

ADVERTISEMENT

ಡಿವಿಜಿನಲ್‌ ರೈಲ್ವೆ ಮಾನೇಜರ್‌ ಆರ್.ಎಸ್‌.ಸಕ್ಸೇನಾ ಗುರುವಾರ ಆದೇಶ ಹೊರಡಿಸಿ, ಮಾರಿಕುಪ್ಪಂನಿಂದ ಬೆಂಗಳೂರಿಗೆ ಹೋಗುವ ಸ್ವರ್ಣರೈಲು (ನಂ. 5650) ಬದಲು ಮೆಮು ರೈಲನ್ನು ಓಡಿಸಬೇಕು ಎಂದು ತಿಳಿಸಿದ್ದರು. ಈ ಸಂಬಂಧವಾಗಿ ಶುಕ್ರವಾರ ಮಧ್ಯಾಹ್ನದೊಳಗೆ ವರದಿ ನೀಡಬೇಕು ಎಂದು ಸೂಚಿಸಿದ್ದರು.

ಹತ್ತು ಬೋಗಿಗಳ ಮೆಮು ರೈಲು ಬಂದರೆ ಮತ್ತೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರಬಹುದೆಂಬ ಕಾರಣಕ್ಕೆ ಮಾರಿಕುಪ್ಪಂ, ಚಾಂಪಿಯನ್‌ರೀಫ್ಸ್‌, ಊರಿಗಾಂ, ಕೋರಮಂಡಲ್‌ ಮತ್ತು ಬೆಮಲ್‌ ನಗರ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ರೈಲ್ವೆ ಇಲಾಖೆ ಸಾಂಪ್ರದಾಯಿಕ ರೈಲನ್ನು ಮುಂದುವರಿಸಿದೆ. ಆದರೆ ಯಾವುದೇ ಕ್ಷಣದಲ್ಲಾದರೂ ಸಾಂಪ್ರದಾಯಿಕ ರೈಲಿನ ಬದಲು ಮೆಮು ಜಾರಿಗೆ ಬರುವ ನಿರೀಕ್ಷೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.