ಮುಳಬಾಗಲು: ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಸುಂಕ ವಸೂಲು ಕೇಂದ್ರದ ಬಳಿ ಗುರುವಾರ ರಾಜ್ಯ ಸುಂಕ ವಿರೋಧಿ ಒಕ್ಕೂಟದ ಸದಸ್ಯರು ಧರಣಿ ನಡೆಸಿ ಸುಂಕ ವಸೂಲಿಯನ್ನು ಸುಮಾರು ಅರ್ಧ ಗಂಟೆ ಕಾಲ ತಡೆದರು. ಆ ಮೂಲಕ ‘ನಾನು ಸುಂಕ ಕೊಡುವುದಿಲ್ಲ’ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಬೆಳಿಗ್ಗೆ 8.30ರ ವೇಳೆಗೆ ಕೇಂದ್ರದ ಬಳಿಗೆ ಬಂದ ಒಕ್ಕೂಟದ ಸದಸ್ಯರು, ಕೇಂದ್ರದ ಎಲ್ಲ ತಡೆಗೋಲುಗಳನ್ನು ತೆರೆಯಬೇಕು ಮತ್ತು ಯಾವುದೇ ವಾಹನ ಚಾಲಕರಿಂದಲೂ ಸುಂಕ ವಸೂಲಿ ಮಾಡಬಾರದು ಎಂದು ಆಗ್ರಹಿಸಿದರು. ಅವರ ಆಗ್ರಹಕ್ಕೆ ಮಣಿದ ಸುಂಕ ವಸೂಲಿ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಂಕ ವಸೂಲು ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಲ್ಲ ತಡೆಗೋಲು ತೆರವುಗೊಳಿಸಿದರು.
ಇದೇ ವೇಳೆ ಒಕ್ಕೂಟದ ಸದಸ್ಯರು, ಸುಂಕ ವಸೂಲಾತಿ ವಿರುದ್ಧ ಆಂದೋಲನ ಹಮ್ಮಿಕೊಂಡಿರುವ ಕುರಿತ ಕರಪತ್ರಗಳನ್ನು, ಕೇಂದ್ರದ ಮೂಲಕ ತೆರಳುತ್ತಿದ್ದ ವಾಹನಗಳ ಚಾಲಕರಿಗೆ ವಿತರಿಸಿದರು. ಯಾವುದೇ ಸುಂಕ ವಸೂಲಾತಿ ಕೇಂದ್ರದಲ್ಲಿ ಸುಂಕವನ್ನು ಪಾವತಿಸಬೇಡಿ. ಉತ್ತಮ ರಸ್ತೆ ಸೌಕರ್ಯ ನೀಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೂಲಭೂತ ಕರ್ತವ್ಯ. ಅದನ್ನು ನಿಭಾಯಿಸದೇ ಜನರಿಂದಲೇ ಅಕ್ರಮವಾಗಿ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದರು.
ಸುಂಕ ಪಾವತಿಸಲು ಸಿದ್ಧರಾಗಿ ಬರುತ್ತಿದ್ದ ವಾಹನಗಳ ಮಾಲೀಕರು, ಚಾಲಕರು ಯಾವುದೇ ತಡೆ ಇಲ್ಲದೇ ಇರುವುದು ಮತ್ತು ಸುಂಕ ವಸೂಲು ಮಾಡದೇ ವಾಹನ ಸಾಗಲು ಅವಕಾಶ ದೊರೆತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸುತ್ತಿದ್ದರು.
ಸುಂಕ ವಸೂಲು ವಿರೋಧಿ ಒಕ್ಕೂಟದ ಜಿಲ್ಲಾ ಸಂಚಾಲಕ ಕೆ.ಆರ್.ಹುಲ್ಲುನಾಚೇಗೌಡ, ವೆಂಕಟರಾಯಪ್ಪ, ಪ್ರಸನ್ನ, ಕರುಣಾಕರ್, ಸೀಸಂದ್ರ ರಮೇಶ್, ವೆಂಕಟೇಶ್, ವಿವಿಧ ಸಂಘಟನೆಗಳ ಮುಖಂಡರಾದ ಕಾರ್ಗಿಲ್ ವೆಂಕಟೇಶ್, ಪರಮೇಶ್, ರಘುಪತಿ, ಮರಕಲಘಟ್ಟ ಶಂಕರಪ್ಪ, ಸಿ.ವಿ.ಶಂಕರಪ್ಪ, ಎನ್.ಗೋಪಾಲಕೃಷ್ಣ, ವಿ.ಗೋಪಾಲರೆಡ್ಡಿ ಪಾಲ್ಗೊಂಡಿದ್ದರು.
ನಂತರ ಧರಣಿ ನಿರತರೆಲ್ಲರೂ ಹೊಸಕೋಟೆ ಸುಂಕ ವಸೂಲಿ ಕೇಂದ್ರದ ಕಡೆಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.