ಕೋಲಾರ: ನಗರದ ಆಚಾರ್ಪೇಟೆಯಲ್ಲಿ ದುಷ್ಕರ್ಮಿಗಳು ಮಂಗಳವಾರ ದ್ವಿಚಕ್ರ ವಾಹನದ ಡಿಕ್ಕಿ ತೆರೆದು ₹ 2.50 ಲಕ್ಷ ದೋಚಿದ್ದಾರೆ.ಈ ಸಂಬಂಧ ತಾಲ್ಲೂಕಿನ ಛತ್ರಕೋಡಿಹಳ್ಳಿ ಗ್ರಾಮಸ್ಥ ಶಿವಕುಮಾರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಶಾಖೆಯಲ್ಲಿ ಬೆಳಿಗ್ಗೆ ₹ 2.50 ಲಕ್ಷ ಡ್ರಾ ಮಾಡಿಕೊಂಡ ಶಿವಕುಮಾರ್ ಆ ಹಣವನ್ನು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟು ಆಚಾರ್ಪೇಟೆ ಬಳಿ ವಾಹನ ನಿಲ್ಲಿಸಿ ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಈ ಸಂದರ್ಭ ನೋಡಿಕೊಂಡು ದುಷ್ಕರ್ಮಿಗಳು ಅವರ ವಾಹನವನ್ನು ಕಳವು ಮಾಡಿ ಪಕ್ಕದ ರಸ್ತೆಗೆ ಹೋಗಿ ಡಿಕ್ಕಿಯಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಕುಮಾರ್ ತರಕಾರಿ ಖರೀದಿಸಿಕೊಂಡು ವಾಪಸ್ ಬಂದು ನೋಡಿದಾಗ ದ್ವಿಚಕ್ರ ವಾಹನ ಇರಲಿಲ್ಲ. ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡಿದಾಗ ಪಕ್ಕದ ರಸ್ತೆಯಲ್ಲಿ ವಾಹನ ಪತ್ತೆಯಾಗಿದೆ. ದುಷ್ಕರ್ಮಿಗಳು ಅವರನ್ನು ಬ್ಯಾಂಕ್ ಬಳಿಯಿಂದಲೇ ಹಿಂಬಾಲಿಸಿ ಬಂದು ಹಣ ಕಳವು ಮಾಡಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.