ADVERTISEMENT

3 ಸಾವಿರ ಸಸಿ ನೆಡುವ ಕಾರ್ಯಕ್ರಮ‌

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:13 IST
Last Updated 7 ನವೆಂಬರ್ 2020, 15:13 IST

ಕೋಲಾರ: ‘ತಾಲ್ಲೂಕಿನ ಎಸ್.ಅಗ್ರಹಾರ ಕೆರೆ ಬಳಿ ಮಾನವ ನಿರ್ಮಿತ ಅರಣ್ಯ ನಿರ್ಮಿಸುವ ನಿಟ್ಟಿನಲ್ಲಿ ನ.8ರಂದು 3 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರಿನ ಯುವ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಸಂದೇಶ್ ರಾಯ್ಕರ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎಸ್‌.ಅಗ್ರಹಾರ ಕೆರೆ ಬಳಿಯಿರುವ ಸರ್ಕಾರಕ್ಕೆ ಸೇರಿದ 1 ಎಕರೆ ಜಾಗದಲ್ಲಿ ಮ್ಯಾರಥಾನ್ ಮಾದರಿಯಲ್ಲಿ ಪ್ಲಾಂಟ್ ಅಥಾನ್ ಎಂಬ ಯೋಜನೆಯಡಿ ಒಂದೇ ದಿನ ಸಸಿ ನೆಡಲಾಗುತ್ತದೆ. ಸಂಸದ ಎಸ್‌.ಮುನಿಸ್ವಾಮಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟಿಸುತ್ತಾರೆ’ ಎಂದರು.

‘ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಲಯನ್ ಸಂಸ್ಥೆ ಪ್ರತಿನಿಧಿ ಮಮತಾ ಅತಿಥಿಗಳಾಗಿ ಭಾಗವಹಿಸುತ್ತಾರೆ. ಬೆಂಗಳೂರು ಮತ್ತು ಮೈಸೂರಿನ ಸುಮಾರು 200 ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಸಿ ನೆಡುತ್ತಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಜಪಾನ್‌ನ ಮಿಯಾವಾಕಿ ಪದ್ಧತಿ ಸಹಾಯದಿಂದ ಜಿಲ್ಲೆಯಲ್ಲಿ ಮುಂದೆ 10 ಸಾವಿರ ಸಸಿ ನೆಡುವ ಗುರಿಯಿದೆ. ಅರಣ್ಯ ಬೆಳೆಸುವಲ್ಲಿ ಮಿಯಾವಾಕಿ ಪದ್ಧತಿ ಪ್ರಮುಖವಾದದ್ದು. ಜಪಾನ್‌ನ ಸಸ್ಯ ತಜ್ಞ ಅಕಿರಾ ಮಿಯಾವಾಕಿ ಕಂಡು ಹಿಡಿದಿರುವ ಈ ಪದ್ಧತಿಯಲ್ಲಿ ಸಾಧಾರಣ ಅರಣ್ಯಗಳಿಗಿಂತ ಮರಗಳು 10 ಪಟ್ಟು ಹೆಚ್ಚು ವೇಗವಾಗಿ ಮತ್ತು 30 ಪಟ್ಟು ಹೆಚ್ಚು ದಟ್ಟವಾಗಿ ಬೆಳೆಯುತ್ತವೆ. ಮೊದಲ 3 ವರ್ಷಗಳ ನಂತರ ಗಿಡಗಳ ನಿರ್ವಹಣೆಯ ಅವಶ್ಯಕತೆ ಸಹ ಇರುವುದಿಲ್ಲ’ ಎಂದು ವಿವರಿಸಿದರು.

‘ಪರಿಸರದ ಸಮತೋಲನಕ್ಕೆ ಗಿಡಗಳನ್ನು ಬೆಳೆಸುವುದು ಅತ್ಯಗತ್ಯ. ಪ್ರವಾಹಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಹಸಿರು ಕವಚದ ಅಭಾವವೇ ಕಾರಣ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸಿರು ಸಂಪತ್ತು ಹೆಚ್ಚಿಸಲು ಒತ್ತು ನೀಡುತ್ತಿದ್ದೇವೆ’ ಎಂದು ಸಂಘಟನೆ ಸದಸ್ಯೆ ಭಾವನಾ ಹೇಳಿದರು.

ಸಂಘಟನೆಯ ಸ್ವಯಂ ಸೇವಕರಾದ ಸಂಕೇತ್, ಭರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.