ADVERTISEMENT

4,871 ಮಂದಿ ಉಮೇದುವಾರಿಕೆ ಸಲ್ಲಿಕೆ

ಗ್ರಾ.ಪಂ 2ನೇ ಹಂತದ ಚುನಾವಣೆ: ನಾಮಪತ್ರ ಪರಿಶೀಲನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 15:31 IST
Last Updated 17 ಡಿಸೆಂಬರ್ 2020, 15:31 IST

ಕೋಲಾರ: ಜಿಲ್ಲೆಯಲ್ಲಿ 2ನೇ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಗಡುವು ಮುಗಿದಿದ್ದು, ಒಟ್ಟಾರೆ 4,871 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬಂಗಾರಪೇಟೆ, ಕೆಜಿಎಫ್‌ ಮತ್ತು ಮುಳಬಾಗಿಲು ತಾಲ್ಲೂಕು ವ್ಯಾಪ್ತಿಯ 67 ಗ್ರಾ.ಪಂಗಳ 1,202 ಸದಸ್ಯ ಸ್ಥಾನಗಳಿಗೆ 2ನೇ ಹಂತದಲ್ಲಿ ಡಿ. 27ರಂದು ಚುನಾವಣೆ ನಡೆಯಲಿದೆ. ಎಲ್ಲಾ ಸದಸ್ಯ ಸ್ಥಾನಗಳಿಗೂ ಉಮೇದುವಾರಿಕೆ ಸಲ್ಲಿಕೆಯಾಗಿದ್ದು, ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಿತು.

ಬಂಗಾರಪೇಟೆ ತಾಲ್ಲೂಕಿನಲ್ಲಿ 21 ಗ್ರಾ.ಪಂಗಳಿದ್ದು, 391 ಸದಸ್ಯ ಸ್ಥಾನಗಳಿವೆ. ಅನುಸೂಚಿತ ಜಾತಿಗೆ ಮೀಸಲಾದ ಸದಸ್ಯ ಸ್ಥಾನಗಳಿಗೆ 459, ಅನುಸೂಚಿತ ಪಂಗಡಕ್ಕೆ ಮೀಸಲಾದ ಸದಸ್ಯ ಸ್ಥಾನಗಳಿಗೆ 69, ಹಿಂದುಳಿದ ವರ್ಗ (ಅ) ಮೀಸಲಾತಿಯ ಸದಸ್ಯ ಸ್ಥಾನಗಳಿಗೆ 102, ಹಿಂದುಳಿದ ವರ್ಗ (ಬಿ) ಮೀಸಲಾತಿಯ ಸದಸ್ಯ ಸ್ಥಾನಗಳಿಗೆ 25 ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಸದಸ್ಯ ಸ್ಥಾನಗಳಿಗೆ 713 ನಾಮಪತ್ರ ಸಲ್ಲಿಕೆಯಾಗಿವೆ.

ADVERTISEMENT

ಕೆಜಿಎಫ್‌ ತಾಲ್ಲೂಕಿನಲ್ಲಿ 16 ಗ್ರಾ.ಪಂಗಳಿದ್ದು, 293 ಸದಸ್ಯ ಸ್ಥಾನಗಳಿವೆ. ಅನುಸೂಚಿತ ಜಾತಿ ಮೀಸಲಾತಿಯ ಸದಸ್ಯ ಸ್ಥಾನಗಳಿಗೆ 438, ಅನುಸೂಚಿತ ಪಂಗಡಕ್ಕೆ ಮೀಸಲಾದ ಸದಸ್ಯ ಸ್ಥಾನಗಳಿಗೆ 51, ಹಿಂದುಳಿದ ವರ್ಗ (ಅ) ಮೀಸಲಾತಿಯ ಸದಸ್ಯ ಸ್ಥಾನಗಳಿಗೆ 46, ಹಿಂದುಳಿದ ವರ್ಗ (ಬಿ) ಮೀಸಲಾತಿಯ ಸದಸ್ಯ ಸ್ಥಾನಗಳಿಗೆ 6 ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಸದಸ್ಯ ಸ್ಥಾನಗಳಿಗೆ 600 ನಾಮಪತ್ರ ಸಲ್ಲಿಕೆಯಾಗಿವೆ.

ಮುಳಬಾಗಿಲು ತಾಲ್ಲೂಕಿನಲ್ಲಿ 30 ಗ್ರಾ.ಪಂಗಳಿದ್ದು, 518 ಸದಸ್ಯ ಸ್ಥಾನಗಳಿವೆ. ಅನುಸೂಚಿತ ಜಾತಿಗೆ ಮೀಸಲಾದ ಸದಸ್ಯ ಸ್ಥಾನಗಳಿಗೆ 800, ಅನುಸೂಚಿತ ಪಂಗಡಕ್ಕೆ ಮೀಸಲಾದ ಸದಸ್ಯ ಸ್ಥಾನಗಳಿಗೆ 127, ಹಿಂದುಳಿದ ವರ್ಗ (ಅ) ಮೀಸಲಾತಿಯ ಸದಸ್ಯ ಸ್ಥಾನಗಳಿಗೆ 170, ಹಿಂದುಳಿದ ವರ್ಗ (ಬಿ) ಮೀಸಲಾತಿಯ ಸದಸ್ಯ ಸ್ಥಾನಗಳಿಗೆ 29 ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಸದಸ್ಯ ಸ್ಥಾನಗಳಿಗೆ 1,236 ನಾಮಪತ್ರ ಸಲ್ಲಿಕೆಯಾಗಿವೆ.

ವೀಕ್ಷಕರ ನೇಮಕ: ರಾಜ್ಯ ಚುನಾವಣಾ ಆಯೋಗವು ಕೋಲಿಜಿಯೇಟ್ ಮತ್ತು ಟಿಕ್ನಿಕಲ್ ಎಜುಕೇಷನ್ ಡೈರಕ್ಟರೇಟ್‌ನ ಜಂಟಿ ನಿರ್ದೇಶಕ ಬಿ.ಪಿ.ವಿಜಯ್ ಅವರನ್ನು ಜಿಲ್ಲೆಗೆ ಗ್ರಾ.ಪಂ ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದೆ.

ವಿಜಯ್‌ ಅವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಜಿಲ್ಲಾ ಕೇಂದ್ರದಲ್ಲಿ ಹಾಜರಿರುತ್ತಾರೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳಿಗೆ ಸಂಬಂಧಪಟ್ಟದಂತೆ ಸಾರ್ವಜನಿಕರು ಚುನಾವಣಾ ವೀಕ್ಷಕರಿಗೆ ನೇರವಾಗಿ ದೂರು ನೀಡಬಹುದು ಅಥವಾ 8884554706 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ದೂರು ಕೊಡಬಹುದು.

ಕಾನೂನು ಕ್ರಮ: 2ನೇ ಹಂತದ ಗ್ರಾ.ಪಂ ಚುನಾವಣೆಯ ಉಮೇದುವಾರಿಕೆ ಹಿಂಪಡೆಯಲು ಡಿ.19 ಕೊನೆಯ ದಿನವಾಗಿದೆ. ಒತ್ತಡ ಅಥವಾ ಆಮಿಷಗಳಿಗೆ ಮಣಿದು ನಾಮಪತ್ರ ಹಿಂಪಡೆದು ಹರಾಜಿನ ಮೂಲಕ ಸದಸ್ಯರ ಅವಿರೋಧ ಆಯ್ಕೆಯಾದರೆ ಆ ಪ್ರಕ್ರಿಯೆ ರದ್ದುಪಡಿಸುತ್ತೇವೆ. ಜತೆಗೆ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಮತ್ತು ಆ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.