ADVERTISEMENT

ಉತ್ತರ ವಿ.ವಿ: 8 ನಕಲಿ ಅಂಕಪಟ್ಟಿ ಪತ್ತೆ, ದೊಡ್ಡ ಜಾಲ ಶಂಕೆ

ಹೊರ ರಾಜ್ಯಗಳ ಪರೀಕ್ಷಾ ಮಂಡಳಿ ಹೆಸರಲ್ಲಿ ತಯಾರು:

ಕೆ.ಓಂಕಾರ ಮೂರ್ತಿ
Published 4 ನವೆಂಬರ್ 2022, 6:46 IST
Last Updated 4 ನವೆಂಬರ್ 2022, 6:46 IST
ತಮಿಳುನಾಡು ರಾಜ್ಯ ಪರೀಕ್ಷಾ ಮಂಡಳಿ ಹೆಸರಲ್ಲಿ ತಯಾರಾಗಿರುವ 12ನೇ ತರಗತಿಯ ನಕಲಿ ಅಂಕಪಟ್ಟಿ
ತಮಿಳುನಾಡು ರಾಜ್ಯ ಪರೀಕ್ಷಾ ಮಂಡಳಿ ಹೆಸರಲ್ಲಿ ತಯಾರಾಗಿರುವ 12ನೇ ತರಗತಿಯ ನಕಲಿ ಅಂಕಪಟ್ಟಿ   

ಕೋಲಾರ: ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯ ನಕಲಿ ಅಂಕಪಟ್ಟಿ ಸಲ್ಲಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಪ್ರಕರಣ ಬಹಿರಂಗವಾಗಿದ್ದು, ಈ ದಂಧೆಯ ದೊಡ್ಡ ಜಾಲವೇ ರಾಜ್ಯದಲ್ಲಿ ಹರಡಿರುವ ಶಂಕೆ ವ್ಯಕ್ತವಾಗಿದೆ. ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಇಂಥ 8 ನಕಲಿ ಅಂಕಪಟ್ಟಿ ಪತ್ತೆಯಾಗಿವೆ.

ಪದವಿಗೆ ಪ್ರವೇಶಾತಿ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ ಮೂಲ ದಾಖಲಾತಿ ಗಳನ್ನು ಆಯಾಯ ಕಾಲೇ ಜುಗಳು ಅಂತಿಮ ಪರಿಶೀಲನೆಗೆಂದು ಈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಹಾಗೂ ಹೊಸಕೋಟೆಯ ಕೆಲ ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ನಕಲಿ ಅಂಕಪಟ್ಟಿ ಪಡೆದು ದಾಖಲಾತಿ ಮಾಡಿಕೊಳ್ಳಲಾಗಿದೆ.

ಕೇರಳ, ತಮಿಳುನಾಡು ರಾಜ್ಯದ ಪರೀಕ್ಷಾ ಮಂಡಳಿ ಹೆಸರಿನಲ್ಲೂ ನಕಲಿ ಅಂಕಪಟ್ಟಿ ತಯಾರು ಮಾಡಿಕೊಂಡು ಬಂದಿರುವುದು ಪತ್ತೆ ಯಾಗಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಒಂದು ತಿಂಗಳ ಹಿಂದೆ ಯೇ ಪ್ರವೇಶಾತಿ ಪ್ರಕ್ರಿಯೆ ನಡೆದಿದೆ.

ADVERTISEMENT

‘ನಕಲಿ ಅಂಕಪಟ್ಟಿ ಜಾಲದ ಬಗ್ಗೆ ವಿಶ್ವವಿದ್ಯಾಲಯಕ್ಕೆ ಮೂಗರ್ಜಿಯೊಂದು ಬಂದಿತ್ತು. ಪದವಿ ಕಾಲೇಜುಗಳಲ್ಲಿ ನಕಲಿ ಅಂಕಪಟ್ಟಿ ಪಡೆದು ಪ್ರವೇಶಾತಿ ನೀಡುತ್ತಿರುವ ಅಂಶವೂ ಆ ಪತ್ರದಲ್ಲಿತ್ತು. ಈ ಹಿನ್ನೆಲೆಯಲ್ಲಿ ಕೂಲಂಕಷವಾಗಿ ದಾಖಲಾತಿ ಪರಿಶೀಲನೆ ನಡೆಸಿದಾಗ ಎಂಟು ಪ್ರಕರಣ ಪತ್ತೆಯಾಗಿವೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಕಲಿ ಅಂಕಪಟ್ಟಿ ಸಲ್ಲಿಸಿರುವ ಪ್ರಕರಣಗಳನ್ನು ತಡೆದು ಪ್ರವೇಶಾತಿ ನಿರಾಕರಿಸಲಾಗಿದೆ. ಎಲ್ಲಾ ಅಂಕಪಟ್ಟಿಗಳನ್ನು ಸಮಗ್ರವಾಗಿ ಪರಿಶೀಲಿಸುತ್ತಿದ್ದೇವೆ’ ಎಂದರು.

ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಖಾಸಗಿ ಕಾಲೇಜುಗಳು ನಕಲಿ ಅಂಕಪಟ್ಟಿ ತಯಾರಿಸುವ ಜಾಲದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ಕಳೆದ ವರ್ಷವೂ ವಿವಿ ವ್ಯಾಪ್ತಿಯಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಪತ್ತೆಯಾಗಿತ್ತು.

‘100ಕ್ಕೂ ಅಧಿಕ ನಕಲಿ ಅಂಕಪಟ್ಟಿ ಸಲ್ಲಿಕೆಯಾಗಿರುವ ಮಾಹಿತಿ ಇದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕಾಲೇಜುಗಳಲ್ಲಿನ ಮೂಲ ದಾಖಲಾತಿ ಪರಿಶೀಲನೆ ನಡೆದಿದೆ. ಇನ್ನೂ ಬೆಂಗಳೂರು ನಗರ ಹಾಗೂ ಕೋಲಾರ ಜಿಲ್ಲೆ ಕಾಲೇಜುಗಳದಾಖಲಾತಿ ಪರಿಶೀಲನೆ ನಡೆಯಬೇಕಿದೆ’ ಎಂದು ವಿಶ್ವವಿದ್ಯಾಲಯದ ಯುಯುಸಿಎಂಎಸ್‌ ತಂತ್ರಾಂಶ ನೋಡಲ್‌ ಅಧಿಕಾರಿ ಲಕ್ಷ್ಮಿ ನರಸಿಂಹಪ್ಪ ಮಾಹಿತಿ ನೀಡಿದರು.

‘ಕೇರಳ ರಾಜ್ಯ ಪರೀಕ್ಷಾ ಮಂಡಳಿಯ ಹೆಸರಿನಲ್ಲಿ 10ನೇ ತರಗತಿ ನಕಲಿ ಅಂಕಪಟ್ಟಿ ತಂದು ರಾಜ್ಯದಲ್ಲಿ ಐಟಿಐ ಮುಗಿಸಿ ಪದವಿಗೆ ಪ್ರವೇಶಾತಿ ಪಡೆದಿದ್ದ ವಿದ್ಯಾರ್ಥಿಯ ಅಂಕಪಟ್ಟಿಯನ್ನೂ ಪತ್ತೆಹಚ್ಚಿ ಪ್ರವೇಶ ನಿರಾಕರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.