ಕೋಲಾರ: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ 221ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ‘ಊರುಭಂಗ’ ನಾಟಕ ಪ್ರೇಕ್ಷಕರನ್ನು ಮೋಡಿ ಮಾಡಿತು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸಿ.ಮಂಜುನಾಥ್ ಅವರನ್ನು ಗೌರವಿಸಲಾಯಿತು. ನಾಟಕದ ಜೊತೆಗೆ ಅತಿಥಿಗಳ ಮಾತಿನ ಹೂರಣವೂ ಇತ್ತು.
ಕೋಲಾರ ನಗರಸಭೆ ಆಯುಕ್ತ ಜಿ.ನವೀನ್ ಚಂದ್ರ ಮಾತನಾಡಿ, ‘ಆದಿಮದ ಸಮಾಜಮುಖಿ ಕಾರ್ಯ ಚಟುವಟಿಕೆ ಕೇಳಿ ಖುಷಿಯಾಯಿತು. ಬೆಟ್ಟದಲ್ಲಿ ಇಂತಹ ಕೇಂದ್ರ ಆರಂಭಿಸಿ, ಇಷ್ಟು ಬೆಳೆಯಲು ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು’ ಎಂದರು.
ಶ್ರೀನಿವಾಸಪುರ ಶ್ರೀಭೈರವೇಶ್ವರ ವಿದ್ಯಾಸಂಸ್ಥೆ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ‘ನೆಲಸಂಸ್ಕೃತಿಯ ನಡೆಯಾಗಿ ಆದಿಮ ಆರಂಭದಿಂದಲೂ ಉತ್ತಮ ಕೆಲಸ ಮಾಡಿಕೊಂಡು ಬಂದಿದೆ. ಅನೇಕರ ಹೆಜ್ಜೆ ಹೆಗಲುಗಳು, ನಡೆ ನುಡಿಗಳು, ಕವಲುಗಳ ನಡುವೆ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಹಲವರ ಜನರ ಬೆವರು ಹನಿಗಳು ಬಿದ್ದಿವೆ’ ಎಂದು ಹೇಳಿದರು.
ಕಲಾವಿದರಿಗೆ ಹಲವು ಪ್ರಕಾರಗಳನ್ನು ಅಭಿವ್ಯಕ್ತಗೊಳಿಸುವ ಹಂಬಲ ಇರುತ್ತದೆ. ಸರ್ಟಿಫಿಕೇಟ್ ಪಡೆಯುವುದಷ್ಟೇ ಅಲ್ಲ; ನಂತರ ಏನಾಗಬೇಕೆನ್ನುವುದು ಮುಖ್ಯ. ರೋಗಗ್ರಸ್ಥ ಸಮಾಜಕ್ಕೆ ವಿವಿಧ ಕಲಾಪ್ರಕಾರಗಳ ಮೂಲಕ ಉತ್ತಮ ಸಂದೇಶ ನೀಡಿ ಮಾದರಿ ಆಗಬೇಕಿದೆ ಎಂದು ಅವರು ರಂಗಶಿಕ್ಷಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಲಾವಿದರು ಸಂತೃಪ್ತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಸಮಾಜ ಅವರನ್ನು ಗಮನಿಸುವ, ಗೌರವದಿಂದ ಕಾಣುವ ಮಟ್ಟಕ್ಕೆ ಇನ್ನೂ ಬಂದಿಲ್ಲ. ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರನ್ನು ಭೇಟಿಯಾದಾಗ ಸವಾಲುಗಳನ್ನು ಹೇಳಿದ್ದನ್ನು ಸ್ಮರಿಸಿಕೊಂಡರು.
ಕಲಾವಿದರು ಧೃತಿಗೆಡದೆ ತಲೆಮಾರುಗಳಿಂದ ತಮ್ಮ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಾಲ ಎಷ್ಟೇ ಆಧುನಿಕವಾದರೂ ನೆಲಸಂಸ್ಕೃತಿ ಹಾಗೂ ಮುಂದಿನ ಪೀಳಿಗೆಗೆ ಕೊಡಬೇಕಾದ ಜವಾಬ್ದಾರಿ ತಮ್ಮ ಮೇಲೆ ಇದೆ. ಕಲಾವಿದರಿಗೆ ಒಂದು ಸಶಕ್ತ ಸಮಾಜ ಕಟ್ಟುವ ಸಾಮರ್ಥ್ಯವಿದೆ ಎಂದು ಹೇಳಿದರು.
ಗೌರವ ಸ್ವೀಕರಿಸಿದ ಶಿಕ್ಷಕ ಸಿ.ಮಂಜುನಾಥ್, ಆದಿಮ ನನಗೆ ಒಂದು ವಿಶ್ವವಿದ್ಯಾಲಯ. ಆದ್ದರಿಂದ ಅನೇಕ ವಿಷಯ, ವಿಚಾರಗಳನ್ನು ಕಲಿಯಲು, ಮಕ್ಕಳಿಗೆ ಕಲಿಸಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆದಿಮ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ಬೆಳಕು ವಿನ್ಯಾಸ ತರಬೇತಿ ನೀಡಿದ ರಾಜೇಶ್ ನೃತ್ಯ ಅವರನ್ನು ಗೌರವಿಸಲಾಯಿತು. ಆದಿಮ ಆಶಯ ಗೀತೆ ಡಿ.ಆರ್.ರಾಜಪ್ಪ ಹಾಡಿದರು.
ಭಾಸ ರಚನೆಯ ಊರುಭಂಗ ನಾಟಕವನ್ನು ಎಲ್. ಗುಂಡಪ್ಪ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಳಕು; ಮೈಕೊ ಶಿವಶಂಕರ್, ಸಂಗೀತ; ಲೀಲಾ ಕೃಷ್ಣ, ವಿನ್ಯಾಸ,ನಿರ್ದೇಶನ; ರಾಮಕೃಷ್ಣ ಬೆಳ್ತೂರು ನೆರವಿನೊಂದಿಗೆ ಆಹಾರ್ಯ ಕಲ್ಚರಲ್ ಟ್ರಸ್ಟ್ ಕಲಾವಿದರು ಪ್ರದರ್ಶನ ನೀಡಿದರು.
ಆದಿಮ ಆಡಳಿತಾಧಿಕಾರಿ ರಮೇಶ್, ರಾಜಪ್ಪ, ಮಣಿ, ತುರಂಡಹಳ್ಳಿ ಶ್ರೀನಿವಾಸ್, ಕಾಳಿದಾಸ್, ನಾಯಕ್, ನಾರಾಯಣಸ್ವಾಮಿ, ಚನ್ನಕೇಶವ, ಮೌನಿಕಾ, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.