ADVERTISEMENT

ಬದಲಾದ ಕುಟುಂಬ ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 4:53 IST
Last Updated 18 ಫೆಬ್ರುವರಿ 2021, 4:53 IST
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್.ರಘುನಾಥ್ ಉದ್ಘಾಟಿಸಿದರು
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್.ರಘುನಾಥ್ ಉದ್ಘಾಟಿಸಿದರು   

ಕೋಲಾರ: ‘ಯಾಂತ್ರಿಕ ಬದುಕಿನ ಈ ದಿನಗಳಲ್ಲಿ ಕುಟುಂಬವೆನ್ನುವ ವ್ಯಾಖ್ಯಾನವೇ ಬದಲಾಗಿದೆ. ವಸುದೈವ ಕುಟುಂಬದ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಿ ಹೇಳಿದ ದೇಶದಲ್ಲಿ ಇಂದು ಅವಿಭಕ್ತ ಕುಟುಂಬಗಳು ಮಾಯವಾಗಿವೆ’ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್.ರಘುನಾಥ್ ವಿಷಾಧಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಗರದ ಜಾಗೃತಿ ಸೇವಾ ಸಂಸ್ಥೆಯ ಮುಸ್ಸಂಜೆ ಮನೆ ವಯೋವೃದ್ಧರ ಹಾಗೂ ಮಕ್ಕಳ ಆಶ್ರಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಇಂದು ಜನರ ಆಧುನಿಕ, ಸ್ವಾತಂತ್ರ್ಯ ಬದುಕಿನ ಅಡಿಯಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತಿ ಕುಟುಂಬಗಳಲ್ಲಿ ಜೀವಿಸುವ ಅನಿವಾರ್ಯತೆಯಲ್ಲಿ ನಾವು ಬದುಕುತ್ತಿದ್ದೇವೆ. ಇದರಿಂದ ಸಂಬಂಧಗಳ ಅರ್ಥವೇ ಮುಂದಿನ ಪೀಳಿಗೆಗೆ ತಿಳಿಯದಾಗುತ್ತದೆ. ಮಕ್ಕಳಿಗೆ ಸಂಸ್ಕಾರ ಹೇಳುವ ಹಿರಿಯರು ಮನೆಯಲ್ಲಿ ಇಲ್ಲವಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ ಮಾತನಾಡಿ, ವಯಸ್ಸಾದ ತಾಯಿ ತಂದೆಯವರು ಸ್ವಾಭಿಮಾನದಿಂದ ಸಕ್ರೀಯವಾಗಿ, ಆರೋಗ್ಯವಂತರಾಗಿ ಮತ್ತು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಶ್ಯವಿರುವ ವಾತಾವರಣವನ್ನು ಕುಟುಂಬಗಳಲ್ಲಿನ ಕಿರಿಯರು ಕಲ್ಪಿಸಿಕೊಟ್ಟಾಗ ಪೋಷಕರು ದೀರ್ಘಾಯುಷ್ಯದೊಂದಿಗೆ ಬದುಕಲು ಸಾಧ್ಯ ಎಂದರು.

ಉಪವಿಭಾಗಾಧಿಕಾರಿ ವಿ.ಸೋಮಶೇಖರ್, ಹಿರಿಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ತಂದೆ ತಾಯಿಯರಿಂದ ಹಣ ಕಸಿದುಕೊಳ್ಳವುದು, ಆಸ್ತಿ ಕಸಿದುಕೊಂಡು ಹೊರದೂಡುವ ಪ್ರಕರಣಗಳ ಹೆಚ್ಚಾಗಿ ನ್ಯಾಯ ಮಂಡಳಿಗೆ ಬರುತ್ತಿವೆ ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಆರ್.ರಘುಪತಿಗೌಡ, ಮುಸ್ಸಂಜೆ ಮನೆವೃದ್ಧಾಶ್ರಮದ ಅಧ್ಯಕ್ಷ ಕೆ.ಆರ್.ಧನರಾಜ್, ನಿರ್ವಾಹಕಿ ಶಾಂತಕುಮಾರಿ, ಮುನಿರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.